ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಸುರಸುಮಸಮ

ನವಿರುನಿಶೆಯಲಿ ಚಿಮ್ಮಿತ್ತು
ಜೀವ ಚೇತನ ಸ್ಫೂರ್ತಿ
ಯಾವ ಲಾಸ್ಯಕೆ ಒಲಿದಿತ್ತು
ಮೊಗ್ಗಾಗಲಿಹ ಮೂರ್ತಿ

ಹಸಿರು ಹೊದ್ದೇ ಎದ್ದಿದೆ
ಬೆವರು ಮೆದ್ದ ಚಿಗುರು
ಭಾವ ಭಂಗಿಯ ಬಿತ್ತಿದೆ
ಭಿತ್ತಿಯೊಳಗೆ ಉಸಿರು

ಹಿಮಸಿಂಚನ ರೋಮಾಂಚನ
ರಮ್ಯ ರವಿಯ ಸ್ಪರ್ಶ
ಸುರಸುಮವದು ಧರೆಗಿಳಿಯಿತು
ಸೆಳೆದು ಸಕಲಾಕರ್ಷ

ಪಕಳೆಯರಳಿತು ತೆರೆಯಿತು
ಗಂಧ ಚೆಲ್ಲಿ ಮುಗುಳು
ಹಾಸ ಕೋಟಿಯ ಹರಡಿತು
ಬಂಧ ಕಳೆದ ಮರುಳು
(೨೧-ಮೇ-೨೦೦೬)

ಹೃದಯದ ಭಾಷೆ

Wednesday, May 14, 2008

ಕಾರಿರುಳ ಸಾಂದ್ರತೆಯಲ್ಲಿ, ಅಲ್ಲಲ್ಲಿ ಉರಿವ ಚಿತೆಗಳ ಮಂದ ಬೆಳಕಿನಲ್ಲಿ, ಮಿನುಗುವ ಮಂಗಲಸೂತ್ರವನ್ನು ಕಂಡ ಆತ, "ನಿನ್ನ ಆ ತಾಳಿಯನ್ನೇ ಒತ್ತೆಯಿಟ್ಟು ಶವಸಂಸ್ಕಾರಕ್ಕೆ ಶುಲ್ಕ ತಾ" ಎಂದು ಅಬ್ಬರಿಸಿ ಪಟ್ಟು ಹಿಡಿದಾಗಲಷ್ಟೇ ಪತಿಯ ದನಿಯ ಪರಿಚಯವಾಯಿತೇ ಚಂದ್ರಮತಿಗೆ? ಅದುವರೆಗೆ..... "ಶುಲ್ಕ ತೆರದೆ ಸಂಸ್ಕಾರ ಮಾಡುವಂತಿಲ್ಲ" ಎಂದಾತ ತಿಳಿಸಿದಾಗಲಾಗಲೀ, "ನನ್ನ ಪಾಲಿನ ಶುಲ್ಕ ಬಿಟ್ಟುಕೊಡಬಲ್ಲೆ, ಒಡೆಯನಿಗೆ ಸೇರಬೇಕಾದ್ದನ್ನಾದರೂ ನೀನು ತೆರಲೇಬೇಕು" ಎಂದಾಗಲಾಗಲೀ ಅವಳಲ್ಲಿನ ಪತ್ನಿ ಏನಾಗಿದ್ದಳು? ಎಂದೂ ಅಗಲಿರದ ಆದರ್ಶ ಪತ್ನಿ ಅಲ್ಪಕಾಲದ ಕಣ್ಮರೆಯಿಂದ ಪತಿಯ ದನಿಯನ್ನೂ ಗುರುತಿಸದಾದಳೆ? ದುಃಖದ ಮಡುವಿನಲ್ಲಿ ಕರಗಿ ಕಳೆದುಹೋದ ಅವಳ ಮಾತೃಹೃದಯ ತನ್ನ ಪತ್ನಿತ್ವದ ತುಣುಕನ್ನೂ ಕಳೆದುಕೊಂಡಿತ್ತೆ?

"ಧರ್ಮ, ಅರ್ಥ, ಕಾಮ, ಮೋಕ್ಷ- ಈ ಯಾವ ಪುರುಷಾರ್ಥಗಳಲ್ಲೂ ನಿನ್ನನ್ನು ಮೀರಿ ನಡೆಯುವುದಿಲ್ಲ, ನಿನ್ನನ್ನು ಅಗಲಿ ಹೋಗುವುದಿಲ್ಲ, ನಿನ್ನ ಸಾಹಚರ್ಯ ಬಿಡುವುದಿಲ್ಲ." ಎಂದು ಭಾಷೆಕೊಟ್ಟು, ಆತ ತೋರಿದ ಏಳು ಹೆಜ್ಜೆಗಳನ್ನಿಟ್ಟು ಮಡದಿಯಾದವಳು- ಧರ್ಮಪತ್ನಿ. ಪುಣ್ಯಕಲಶಾಭಿಸೇಚನಗಳಿಂದ ಅವನೊಂದಿಗೆ ಮಂಗಳಸ್ನಾತಳಾಗಿ ಸಾಮ್ರಾಜ್ಞಿಯಾದವಳು- ಪಟ್ಟ ಮಹಿಷಿ. ಮಹಾಸಾಮ್ರಾಟನಾಗುವ ಮಗನನ್ನು ಹೆತ್ತವಳು- ರಾಜಮಾತೆ. ಅವಳು ಈಗೆಲ್ಲಿ? ರಘುವಂಶತಿಲಕ, ಧವಳಕೀರ್ತಿಧಾರಕ, ಚಕ್ರವರ್ತಿ ಹರಿಶ್ಚಂದ್ರ ಮಹಾರಾಜನ ಮನೋಮಂದಿರ ಬೆಳಗಿದ ಚಂದ್ರಮತಿ, ಅರಮನೆಯಲ್ಲೇ ಹುಟ್ಟಿ, ಬೆಳೆದು, ಬೇಕಾದ್ದನ್ನು ಉಂಡುಟ್ಟು, ಸೇರಿದ ಮನೆಯ ಕೀರ್ತಿಗೆ ಮಂಗಳದ ತಿಲಕವಿಟ್ಟು, ಕಾಲ ತಿರುಗಿ ಹೊರಳಿದಾಗ ಪಟ್ಟ ಬಿಟ್ಟು, ಚಿಂದಿಯುಟ್ಟು, ಪತಿಯಿಂದಲೇ ಮಾರಲ್ಪಟ್ಟು, ಊಳಿಗದವರನ್ನೂ ಉಳ್ಳವರನ್ನಾಗಿಸುತ್ತಿದ್ದಾಕೆ ತಾನೇ ಊಳಿಗದ ಆಳಾಗಿ, ಮಗನಿಗೆ ತಂಗಳು ಉಣಲಿಟ್ಟು ಕಣ್ಣೀರಿಟ್ಟಳೆ? ಧರ್ಮಕ್ಕೆ ಮೀರದಂತೆ ನಡೆಯುವ ನಿಯಮದಲ್ಲಿ ಬಂಧಿತಳಾಗಿ ಮಗನನ್ನು ಕಳೆದುಕೊಂಡು ದುಃಖದ ತಾಪದಲ್ಲಿ ಧರ್ಮವನ್ನು ಹಳಿದಳೆ?

ಇವೆಲ್ಲ ಉತ್ತರಿಸಲಾರದ ಪ್ರಶ್ನೆಗಳು. "ಚಂದ್ರಮತಿಯ ಪ್ರಲಾಪ" ಎಂಬುದು ಕಾವ್ಯ ವಿಸ್ಮಯ. ಅಲ್ಲಿ ಮಾತೃಹೃದಯದ ವಿಜ್ರಂಭಣೆಯಿದೆ, ಪತ್ನಿಯದ್ದಲ್ಲ. ಮಾತೃತ್ವ ಎಲ್ಲವನ್ನೂ ಮೀರಿದ ನೆಲೆ. ಒಂದು ಜೀವದ ಹುಟ್ಟಿನೊಂದಿಗೆ ಮರುಹುಟ್ಟು ಪಡೆವ ಹಿರಿಯ ಜೀವ- ಮಾತೆ. ಅಲ್ಲಿಂದ ಆ ಹೆಣ್ಣಿನ ಜೀವನದ ಪ್ರಮುಖವಾದೊಂದು ಮುಖ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅದುವರೆಗೆ ಮಗಳಾಗಿ, ಅಕ್ಕ-ತಂಗಿಯಾಗಿ, ಮಡದಿ-ಸೊಸೆಯಾಗಿ ಇದ್ದಾಕೆ ಮಾತೆಯೂ ಆದಾಗ ಹಲವಾರು ನೆಲೆಗಳಲ್ಲಿ ಆಕೆಯ ದೃಷ್ಟಿಕೋನ ಬದಲಾಗುತ್ತದೆ.

ಮಾತೃಸ್ಥಾನ ಪಡೆದ ಹೆಣ್ಣು ತನ್ನ ತಾಯಿ-ಅತ್ತೆಯರನ್ನು ಇನ್ನೂ ಹೆಚ್ಚಾಗಿ ಗೌರವಿಸಬಲ್ಲಳು. ಅವರ ಭಾವನಾನೆಲೆಯ ಹಲವಾರು ಸೂಕ್ಷ್ಮ ಎಳೆಗಳನ್ನೂ ಅರಿಯಬಲ್ಲಳು. ಪತಿಯ ಕಡೆಗೆ ಒಲವಿನೊಂದಿಗೆ ಮಮತೆಯಿಂದಲೂ ನೋಡಬಲ್ಲಳು. ಜೊತೆಗೆ, ತನಗೀ ಮಾತೃತ್ವವೆಂಬ ಉನ್ನತ ಸ್ಥಾನ ದೊರೆಯಲು ಕಾರಣೀಭೂತನಾದ ಆತನಲ್ಲಿ ಹೆಚ್ಚಿನ ಗೌರವ ಹೊಂದಬಲ್ಲಳು. ಸಾಮಾನ್ಯವಾಗಿ ಹೆಣ್ಣಿನಲ್ಲಿರುವ ಸೂಕ್ಷ್ಮಗ್ರಾಹಿತ್ವಕ್ಕಿಂತಲೂ ಮೇಲ್ಮಟ್ಟದ ಸೂಕ್ಷ್ಮತೆ ಹೊಂದುವಳು. ತನ್ನ ಕಂದನ ಬೇಕು-ಬೇಡಗಳಿಗೆ ಸ್ಪಂದಿಸುವ ಅವಳ ಅಗೋಚರ ಶಕ್ತಿಗೆ ಬೆರಗಾಗದವರುಂಟೆ! ಅವಳ ಈ ಶಕ್ತಿ `ಮಾತೃ ಹೃದಯ'. ಜನ್ಮತಃ ಸಿದ್ಧಿಸಿದ ಈ ಶಕ್ತಿ ಕೆಲವರಲ್ಲಿ ಜಾಗೃತವಾಗುವುದೇ ಇಲ್ಲ. ಇನ್ನು ಕೆಲವರಲ್ಲಿ ಕಾಲಕ್ರಮೇಣ ಬಲಿತರೆ, ಮತ್ತೆ ಕೆಲವರಲ್ಲಿ ಸಮಯ ಸಂದಂತೆ ಸವೆಯುತ್ತದೆ. ಇವು ಲೋಕರೀತಿ. ಮಾತೃಹೃದಯ ಮಾತ್ರ ನಿಗೂಢ, ಅವಿಚ್ಛಿನ್ನ ಶಕ್ತಿ. `ಹೃದಯ ಭಾಷೆ'ಯ ಮೊದಲ ಹೆಜ್ಜೆ ಅಲ್ಲೇ, ಮಾತೆಯ ಮನೋಮಂಟಪದಲ್ಲಿ.

ಅಂಕುರಿಸಿದ ಜೀವದ ಮೊದಲ ಮಿಡಿತ ಅವಳಿಗಲ್ಲದೆ ಇನ್ನಾರಿಗೂ ತಿಳಿಯದಂತಹ ಸಂರಕ್ಷಿತ ಕೋಟೆಯಲ್ಲಿ, ಹಗಲೂ ಇರುಳೂ ತನ್ನ ಇಂದ್ರಿಯಾತೀತ ಸಂವೇದನೆಗಳಿಂದ ಸಂಭಾಷಿಸಿ, `ಕಂದನಿಗಾಗಿಯೇ ತನ್ನ ಜೀವ' ಎಂಬಷ್ಟರ ಮಟ್ಟಿಗೆ ತನ್ಮಯಳಾಗುವಳು, ತಾಯಿಯಾಗುವವಳು. ತುಡಿಯುವ ಜೀವವನ್ನು ಕೂಸಾಗಿಸಿ ಪ್ರೀತಿಯಿಂದ ಪ್ರೀತಿಸುವ ಕೈಗಳಿಗೆ ನೀಡುವಳು. ಕಾತರತೆಯಿಂದ ಕಾಯುವ ಹಿರಿಯ ಜೀವಗಳಿಗೆ `ಅಜ್ಜಿ-ಅಜ್ಜ'ನ ಪಟ್ಟ ದೊರಕಿಸುವಳು. "ಇವೆಲ್ಲ ಎಲ್ಲರಿಗೂ ತಿಳಿದಿರುವ ವಿಷಯವೇ, ಹೊಸತೇನು?" ಎಂದಿರಾ? ಸರಿ! ಈ ಮಾತೃಹೃದಯದ ಒಳಹೊಕ್ಕು ನೋಡಬಲ್ಲವರು ಯಾರು? ಪರಕಾಯಪ್ರವೇಶ ಕಲೆಯನ್ನು ಬಲ್ಲವರು, ಅಜನ ಪ್ರತಿಸ್ಪರ್ಧಿಗಳು, ಭೂಲೋಕದ ಬ್ರಹ್ಮರು; ಕವಿಗಳು. ಅಂಥ ಕವಿ ಪರಂಪರೆಯಲ್ಲಿ ಮಹಾಮಹಿಮರು ಆಗಿಹೋಗಿದ್ದಾರೆ, ಘಟಾನುಘಟಿಗಳು ಸಾಗಿಬಂದಿದ್ದಾರೆ. ಅಂತಹ ಶ್ರೇಷ್ಠ ಕೃತಿಗಳಲ್ಲೊಂದಾದ ರಾಮಾಯಣವನ್ನೂ ವಾಲ್ಮೀಕಿಯನ್ನೂ ಬಲ್ಲದ ಭಾರತೀಯನಿಲ್ಲ. ಆ ಮಹಾಕವಿ ಮಾತೃಹೃದಯದ ಸೂಕ್ಷ್ಮತೆಯ ಚಿತ್ರಣವನ್ನು ನೀಡಿದ ಸಂದರ್ಭಗಳಲ್ಲಿ ಎರಡನ್ನು ಕವಿ ಡಾ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು 1998ರ ಜೂನ್'ನಲ್ಲಿ ಒಮ್ಮೆ ಆಸಕ್ತರಿಗೆ ವಿವರಿಸಿದರು. ಆ ಎರಡು ಸಂದರ್ಭಗಳು ಹೀಗಿವೆ:

ಮೊದಲನೆಯದು, ಶ್ರೀರಾಮನಿಗೆ ಯೌವ್ವರಾಜ್ಯಾಭಿಷೇಕದ ನಿಶ್ಚಯವಾದಂದು. ಈ ಕರ್ಣಾನಂದಕರ ವಾರ್ತೆ ಅರಮನೆಯಲ್ಲೆಲ್ಲ ಹಬ್ಬಿತ್ತು. ಪ್ರಮುಖವಾಗಿ ಕೌಸಲ್ಯೆಯ ಅಂತಃಪುರ ವಿಶೇಷ ಸಡಗರದಲ್ಲಿತ್ತು. ಪಟ್ಟಮಹಿಷಿ ಕೌಸಲ್ಯಾದೇವಿ ರಾಜಮಾತೆಯಾಗುವಳು. ಇದಕ್ಕಿಂತ ಸಂಭ್ರಮ ಬೇಕೆ? ಇಂತಹ ವಾರ್ತೆ ಸುತ್ತೆಲ್ಲ ಹಬ್ಬಿರುವ ಹೊತ್ತು, ಪ್ರಪ್ರಥಮವಾಗಿ ಮಾತೃದೇವತೆಯ ಚರಣ ಘ್ರಾಣಿಸಿ ಆಶೀರ್ವಾದ ಪಡೆಯಲು ಬಂದ ಮರ್ಯಾದಾಪುರುಷೋತ್ತಮ. ಪತ್ನೀಸಹಿತನಾಗಿ ಪೊಡಮಟ್ಟುಕೊಂಡವನನ್ನು ಮೇಲೆತ್ತಿ, ನೆತ್ತಿಸವರಿ, ತುಂಬಿನಿಂತ ಕಂಗಳಲ್ಲಿ ಆತನ ಬಿಂಬಪ್ರತಿಬಿಂಬಗಳನ್ನು ನಿಲ್ಲಿಸಿಕೊಂಡ ಆಕೆ ಮೊದಲಾಗಿ ಕೇಳಿದ್ದೇನು! "ನೀನು ಉಂಡೆಯಾ, ಕಂದ?" ತಾಯಿಯಲ್ಲದೆ ಇನ್ನಾರೂ ಈ ಪ್ರಶ್ನೆ ಕೇಳಲಾರರು, ಅದೂ ಇಂಥಾ ಉನ್ಮತ್ತ ಸಂದರ್ಭದಲ್ಲಿ. ಪಕ್ಕದಲ್ಲಿ ಕೂರಿಸಿಕೊಂಡು ತನ್ನ ಕೈಯಾರ ಮಗ-ಸೊಸೆಗೆ ಉಣಬಡಿಸಿದಳು ಪಟ್ಟದರಸಿ, ಒಬ್ಬ ಮಾತೆಯಾಗಿ. ಆ ಸೂಕ್ಷ್ಮವನ್ನು ಹಿಡಿದ ಕವಿ ಧನ್ಯ.

ಎರಡನೆಯದು, ಜನನಿಬಿಡ ಅಯೋಧ್ಯೆಯನ್ನು ತೊರೆದು ಚಿತ್ರಕೂಟದಲ್ಲಿ ಸೀತಾಸಹಿತ ರಾಮ-ಲಕ್ಷ್ಮಣರು ಕುಟೀರ ಹೂಡಿದ್ದಾಗ.... ಅಣ್ಣನ ನೆಲೆಯನ್ನು ಪತ್ತೆಹಚ್ಚಿದ ಭ್ರಾತೃಪ್ರೇಮಿ ಭರತ ಅಲ್ಲಿಗೆ ಹೊರಟ, ಹಿಂಬಾಲಿಸಿದ ಪರಿವಾರ ಸಹಿತ. ದುಡುಕಿದ ತಮ್ಮನನ್ನು ಸುಮ್ಮನಾಗಿಸಿ, ಚಿಕ್ಕವರನ್ನು ಚೆಂದದಿಂದ ಸ್ವಾಗತಿಸಿ, ಪ್ರೀತಿಯಿಂದ ಆಲಂಗಿಸಿ, ಮಾತೆಯರಿಗೆ ಮಣಿದು, ತಂದೆಯ ಅಗಲಿಕೆಗೆ ನೊಂದು, ಶ್ರಾದ್ಧಕ್ರಿಯೆಗಾಗಿ ವಸಿಷ್ಠರಿಂದ ದೀಕ್ಷಿತನಾದ ಶ್ರೀರಾಮ. ಕ್ರಿಯಾವಿಧಿಗಳನ್ನೆಲ್ಲ ಪೂರೈಸಿ, ಮತ್ತೆ ಮಾತೆಯರ ಚರಣಗಳಿಗೆ ಎರಗಿದವನನ್ನು ಮೇಲೆತ್ತಿ ತಬ್ಬಿದರು, ಆಶೀರ್ವದಿಸಿದರು. ಕೊನೆಯಲ್ಲಿ ನಿಂತಿದ್ದ ಕೌಸಲ್ಯೆಗೆ ಮಗನ ಮುಖ ಕಾಣುತ್ತಿಲ್ಲ, ಕಂಬನಿಯ ಪೊರೆಯಾವರಿಸಿದೆ. ಪಾದಕ್ಕೆರಗಿದವನನ್ನು ಹೇಗೋ ಎತ್ತಿಕೊಂಡಳು, ನೆತ್ತಿ ಸವರಿದಳು, ಹಾರೈಕೆ ಗುಣುಗಿದಳು. ಆಗಲೇ ಅವನ ನಾರುಮಡಿಗೆ ಮೆತ್ತಿದ್ದ ಮಣ್ಣನ್ನು ಕಂಡು ಮೆಲುವಾಗಿ ಕೊಡಹಿದಳು. ನೆರೆದಿದ್ದ ಅಷ್ಟೂ ಮಂದಿಯ ದೃಷ್ಟಿಗೆ ಕಾಣದಿರುವಂತೆ, ಮರೆಯಲ್ಲಿ ನಾಜೂಕಾಗಿ ಸವರಿದಳು. ಮಗನ ಸ್ಥಿತಿಗೆ ತಾಯಿಯ ಹೃದಯ ಚೀರಿರಬೇಕು. ಅರಮನೆಯಲ್ಲಿ ಸಿಂಹಾಸನದ ಮೇಲೆ ಇರಬೇಕಾದವನು ಇಲ್ಲಿ ಕಾನನದ ಕಲ್ಲ ಮೇಲೆ! ಕೃಷ್ಣಾಜಿನದ ಮೇಲೆ ಕುಳಿತು ನಿತ್ಯಕ್ರಿಯಾವಿಧಿಗಳನ್ನು ನಡೆಸಬೇಕಾದವನು, ಇಲ್ಲಿ ಮಣ್ಣಿನಲ್ಲಿ! ಯಾವುದೇ ತಾಯಿಯ ಹೃದಯ ಇದನ್ನು ಸಹಿಸದು, ಆದರೆ ವಿಧಿಯಿಲ್ಲ. ಕಣ್ಣಿಗೆ ಕಂಡ ಮೃತ್ತಿಕೆಯನ್ನು ತೊಡೆಯಬಲ್ಲಳು, ಅಷ್ಟೇ.

ಇಂತಹ ಅನೇಕಾನೇಕ ಉದಾಹರಣೆಗಳನ್ನು ನಮ್ಮ ಮಹಾಕಾವ್ಯಗಳಲ್ಲಿ ಕಾಣಬಹುದು. ಕುಂತಿ ತನ್ನ ಭೀಮನಿಗೆ ವಿಶೇಷವಾಗಿ ತಿಂಡಿ-ತೀರ್ಥಗಳನ್ನು ತಯಾರಿಸಿ ನೀಡುತ್ತಿದ್ದಳು, ಆತ ಎಲ್ಲರಂತಲ್ಲವೆಂದು ಆಕೆಗೊಬ್ಬಳಿಗೇ ಗೊತ್ತು. ಬಕಾಸುರ ಸಂಹಾರಕ್ಕೆ ಭೀಮನನ್ನು ಕಳುಹಲು ಮುಂದಾದಾಗ, ಅವಳದು ತ್ಯಾಗಬುದ್ಧಿಯಲ್ಲ, ಭೀಮನಿಗಾಗಿ ಸ್ವಾರ್ಥ. ಬಕಾಸುರನಿಗಾಗಿ ನೀಡಲ್ಪಡುವ ಅಷ್ಟೂ ಆಹಾರ ತನ್ನ ಭೀಮನ ಹೊಟ್ಟೆಯನ್ನು ಒಮ್ಮೆ ತಂಪಾಗಿಸಬಲ್ಲದೆಂದು ಅವಳ ಹಂಚಿಕೆ, ಜೊತೆಗೆ ಅವನ ಅದಮ್ಯ ಶಕ್ತಿಯಲ್ಲಿನ ನಂಬಿಕೆ. ಕಂದನಿಗಾಗಿ ತಾಯಿ ಏನೂ ಮಾಡಬಲ್ಲಳಲ್ಲವೆ? ಅರ್ಜುನ ದ್ರೌಪದಿಯನ್ನು ಗೆದ್ದು ತಂದು, ತಾನೊಂದು ಅಮೂಲ್ಯ ಭಿಕ್ಷೆ ತಂದಿರುವುದಾಗಿ ಹೇಳಿದಾಗ, `ಎಲ್ಲರೂ ಸಮನಾಗಿ ಹಂಚಿಕೊಳ್ಳಿ' ಎಂದು ನುಡಿದದ್ದೂ ಆ ಹೃದಯವೇ, ನಂತರ ನೊಂದುಕೊಂಡಿದ್ದೂ ಅದೇ. ಆದರೆ ಇದೇ ಹೃದಯ ತನ್ನ ಚೊಚ್ಚಲ ಕಂದನನ್ನು ಹೇಗೆ ದೂರ ಮಾಡಿತು? ಅದು ಕವಿಯ ಕಾವ್ಯನೈಪುಣ್ಯತೆ ಎನ್ನೋಣವೆ? ಬೇಡ, ಈಗಲೂ ನಮ್ಮಲ್ಲೆಷ್ಟು ಹೆಣ್ಣುಮಕ್ಕಳು ತಮ್ಮ ಅನೈತಿಕ ಸಂತಾನವನ್ನು ಸಮಾಜದ ನಿಂದೆಗಳಿಗೆ ಹೆದರಿ ತ್ಯಜಿಸುವುದಿಲ್ಲ! ಇವರಿಗೆಲ್ಲ ಕುಂತಿ ಹಿರಿಯಕ್ಕ ಅನ್ನೋಣವೆ?

ಮಾತೃತ್ವದ ಮಾತು ಬಂದಾಗ ಗಾಂಧಾರಿಯನ್ನು ಹೊರಗುಳಿಸುವಂತಿಲ್ಲ. ಮಹಾಸಾಧ್ವಿ, ಪತಿವ್ರತೆ ಎಂದೆಲ್ಲ ಪಟ್ಟ ಹೊತ್ತ ಆಕೆ ಮಾತೆಯೂ ಹೌದು. ವಿಶ್ಲೇಷಣೆಗಳೇನೇ ಇರಲಿ, ಸುಯೋಧನಾದಿ ನೂರು ಮಂದಿ ಗಂಡುಮಕ್ಕಳ ತಾಯಿ ಎನಿಸಿಕೊಂಡಾಕೆ, ದುಶ್ಯಲೆಯ ಮಾತೆ. ತನ್ನ ಕರುಳಕುಡಿಗಳನ್ನು ಒಮ್ಮೆಯೂ ಕಣ್ಣಿಂದ ನೋಡಲಾರದ ಧರ್ಮಬಂಧನದಲ್ಲಿ ಸಿಲುಕಿದಾಕೆ. ಅವಳ ಮನಸ್ಸು ಅದೆಷ್ಟು ತುಡಿದಿರಬಹುದು! ಆದರೆ, ಅಷ್ಟು ವರ್ಷಗಳ ತನ್ನ ತಾಪಸ ಶಕ್ತಿಯನ್ನೆಲ್ಲ ಒಬ್ಬ ಮಗನಿಗೆ ಧಾರೆಯೆರೆಯಲು ಸಿದ್ಧಳಾಗಿಸಿದ್ದು ಅವಳ ಮಾತೃತ್ವ. ಆತನ ಹಠಸಾಧನೆಗಾಗಿ ಬೆಳೆದುನಿಂತ ಶೂರ-ವೀರ-ಪರಾಕ್ರಮಿಯಾದ ಮಗನನ್ನು ನಿರ್ವಸ್ತ್ರನಾಗಿ ಕಣ್ಣೆದುರು ಬರಹೇಳಿದ್ದಳಾಕೆ. ಶ್ರೀಕೃಷ್ಣನ ಕೈವಾಡದಿಂದ ಮಗನನ್ನು ಸಂಪೂರ್ಣ ವಜ್ರದೇಹಿಯಾಗಿಸಲು ಸಾಧ್ಯವಾಗದೇ ಹೋದಾಗ ನೊಂದುಕೊಂಡಳೆ? ವಿಧಿಯನ್ನು ಹಳಿದಳೆ? ಒಪ್ಪಿಕೊಂಡಳೆ? ಹಾಗೆಯೇ, ವನವಾಸ, ಅಜ್ಞಾತವಾಸಗಳಿಗೆಂದು ತೆರಳಿದ ದ್ರೌಪದಿ ತನ್ನೈದೂ ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು ಹೊರಟಳಲ್ಲ, ಆಕೆಯಲ್ಲಿನ ತಾಯಿಯನ್ನು ಕವಿ ಗಮನಿಸಲೇ ಇಲ್ಲ. ಸುಭದ್ರೆಗಾದರೋ ತನ್ನ ಅಣ್ಣನ ಆಸರೆಯಿತ್ತು, ಮಗನ ಸಹವಾಸವಿತ್ತು. ದ್ರೌಪದಿಗೆ ಏನಿತ್ತು? ಕೊನೆಯಲ್ಲಿ ಮಗ ಅಭಿಮನ್ಯುವನ್ನು ಕಳೆದುಕೊಂಡ ಅರ್ಜುನ ಗೋಳಿಟ್ಟು ಅತ್ತದ್ದನ್ನು ಕಂಡ ದ್ರೌಪದಿಗೆ ತನ್ನೈದು ಮಕ್ಕಳಿಗಾಗಿ ಭೀಮನ ಹೊರತಾಗಿ ಯಾರೂ ಮರುಗದಾಗ ಹೇಗಾಗಿರಬೇಡ! ಇಲ್ಲೆಲ್ಲ ಕವಿ ಎತ್ತಿ ಹಿಡಿದದ್ದು ಕಲಿತನವನ್ನು, ಧರ್ಮವನ್ನು; ಮಾನವೀಯತೆಗೇ ಸ್ಥಾನವಿರಲಿಲ್ಲ, ಮತ್ತೆ ಮಾತೃತ್ವಕ್ಕೆಲ್ಲಿ!

ಇಂದಿನ ಸಮಾಜದಲ್ಲಿ, ಗಡಿಬಿಡಿಯ ಜೀವನದಲ್ಲಿ, ಎಷ್ಟು ಮಾತೆಯರಿಗೆ ತಮ್ಮ ಕರುಳಕುಡಿಗಳನ್ನು ಮುದ್ದಿಸಲು ಸಮಯವಿರುತ್ತದೆ? ಬೆಳಗ್ಗೆದ್ದು ಅವರನ್ನೂ ಹೊರಡಿಸಿಕೊಂಡು, ಬಹುತೇಕ ಅಟ್ಟಿಕೊಂಡು, ಹೊರನಡೆದರೆ ಸಂಜೆ ಹಿಂದಿರುಗಿದಾಗ ರಾತ್ರೆಯ ಊಟ ಮತ್ತು ಮರುದಿನದ ತಯಾರಿಗಳಿಗೆ ಅವಳ ಸಮಯ ಮೀಸಲು. ಇಂತಹ ಯಾಂತ್ರಿಕತೆಯಲ್ಲಿ ಕಳೆದುಹೋಗುವವರು ಯಾರು? ನಿಮ್ಮ ಹೃದಯದ ಭಾಷೆ ಯಾವುದು? ಎದೆಯ ಕದ ತಟ್ಟಿ ನೋಡಿ.
(ಮೇ-೨೦೦೨)
(ಡೆಟ್ರಾಯಿಟ್ ಪಂಪ ಕನ್ನಡ ಕೂಟದ ಸಹಯೋಗದೊಂದಿಗೆ, ಅಮೆರಿಕಾ ಕನ್ನಡ ಕೂಟಗಳ ಆಗರ- ಅಕ್ಕ -ದ ಎರಡನೇ ವಿಶ್ವಕನ್ನಡ ಸಮ್ಮೇಳನ-೨೦೦೨ರ ಸ್ಮರಣ ಸಂಚಿಕೆ 'ಸ್ಪಂದನ'ದಲ್ಲಿ ನನ್ನೀ ಲೇಖನ ಪ್ರಕಟವಾಗಿತ್ತು.)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:45 PM
Labels:

8 ಪತ್ರೋತ್ತರ:
Harish - ಹರೀಶ said...
ಚೆನ್ನಾಗಿ ಬಂದಿದೆ... ಆದರೆ ಒಂದು ವಿಷಯ...
"ಧರ್ಮ, ಅರ್ಥ, ಕಾಮ, ಮೋಕ್ಷ- ಈ ಯಾವ ಪುರುಷಾರ್ಥಗಳಲ್ಲೂ ನಿನ್ನನ್ನು ಮೀರಿ ನಡೆಯುವುದಿಲ್ಲ, ನಿನ್ನನ್ನು ಅಗಲಿ ಹೋಗುವುದಿಲ್ಲ, ನಿನ್ನ ಸಾಹಚರ್ಯ ಬಿಡುವುದಿಲ್ಲ." ಎಂದು ಬರೆದಿದ್ದೀರಿ."ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ" ಎಂದು ಹೇಳಲ್ಪಟ್ಟಿದೆಯೇ ವಿನಹ ಮೋಕ್ಷದ ಬಗ್ಗೆ ಎಲ್ಲೂ ಪ್ರಸ್ತಾಪಿಸಲಾಗಿಲ್ಲ. ಆ ರೀತಿ ಹೇಳುವುದು, ಭಾಷೆ ಕೊಡುವುದು ಅಸಾಧ್ಯ ಕೂಡ.. ಅಲ್ಲವೇ?
May 14, 2008 9:48 PM

ಸುಪ್ತದೀಪ್ತಿ suptadeepti said...
ನಮಸ್ಕಾರ ಹರೀಶ್, ಸ್ವಾಗತ.
ತಾತ್ವಿಕವಾಗಿ ಇದು ಅಸಾಧ್ಯ. ಆದರೆ, ನಮ್ಮ ನಂಬಿಕೆಯಂತೆ- 'ಪತಿ-ಪತ್ನಿ ಸಂಬಂಧ ಏಳೇಳು ಜನ್ಮಗಳದ್ದು ಅಂತಾದಾಗ, ಮೋಕ್ಷದ ದಾರಿಯೂ ಜೊತೆಯಲ್ಲೇ ಸಾಗಬೇಕಾದ ಹಾದಿಯಾಗಿರುವಾಗ, ಮೋಕ್ಷದಲ್ಲೂ ಜೊತೆಯಾಗಿರುವುದು ಯಾಕೆ ಸಾಧ್ಯವಿಲ್ಲ'- ಅನ್ನುವ ತರ್ಕದ ಮೇಲೆ ಹಾಗೆ ಬರೆದೆ. ಮದುವೆಯ ಮಂತ್ರದ ಆಧಾರದ ಮೇಲಲ್ಲ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
May 14, 2008 10:13 PM

sunaath said...
ಜ್ಯೋತಿ,
ಮಾತೃಹೃದಯದ ಬಗೆಗೆ ಬಹಳ ಚೆನ್ನಾಗಿ ಬರೆದಿರುವಿ.

ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಅಸಿಸ್ಟಂಟ ಕಮಿಶನರ ಆದಾಗಿನ ಘಟನೆಯೊಂದನ್ನು ನೀನೂ ಓದಿರಬಹುದು. ಅವರು ತಮ್ಮ ಮನೆಯಿಂದ ಕಚೇರಿಗೆ ಹೊರಡುವ ತರಾತುರಿಯಲ್ಲಿದ್ದಾರೆ. ಅವರ ತಾಯಿ "ಅಯ್ಯೊ, ಮಗೂ ಎಲ್ಹೋಯ್ತು? ಸರಿಯಾಗಿ ಊಟಾನೇ ಮಾಡ್ಲಿಲ್ಲ" ಎಂದು ಇವರನ್ನು ಹುಡುಕುತ್ತಿದ್ದರಂತೆ!
-ಸುನಾಥಕಾಕಾ
May 15, 2008 10:27 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಕಾಕಾ.
ಮಾಸ್ತಿಯವರ ಅಮ್ಮನ ಬಗ್ಗೆ ಗೊತ್ತಿರಲಿಲ್ಲ. ಆ ತಲೆಮಾರಿನ, ಮತ್ತು ನಂತರದ ಒಂದೆರಡು ತಲೆಮಾರಿನ ಬಹುತೇಕ ಅಮ್ಮಂದಿರು ಇದ್ದದ್ದೇ/ ಇರುವುದೇ ಹಾಗೆ, ಅಲ್ಲವೆ?
May 15, 2008 11:10 AM

ತುರಂಗ said...
ವಾಲ್ಮೀಕಿರಾಮಾಯಣದ ಅಯೋಧ್ಯಾಕಾಂಡದ ಎರಡು ಸಂದರ್ಭಗಳ ಬಗ್ಗೆ ನೀವು ಬರೆದಿರುವುದು ಸ್ವಾರಸ್ಯವಾಗಿದೆ. ಆದರೆ, ನನ್ನ ರಾಮಾಯಣದ ಆವೃತ್ತಿಯಲ್ಲಿ ಇವನ್ನು ಈ ರೀತಿ ಹೇಳಿಲ್ಲ. ಮೊದಲನೆಯ ಸಂದರ್ಭದ ಶ್ಲೋಕಗಳು ಹೀಗಿವೆ -(ಅಯೋಧ್ಯಾಕಾಂಡನ ನಾಲ್ಕನೆಯ ಸರ್ಗದ ಶ್ಲೋಕಗಳು)
ಇತ್ಯುಕ್ತಃ ಸೋಽಭ್ಯನುಜ್ಞಾತಃ ಶ್ವೋಭಾವಿನ್ಯಭಿಷೇಚನೇ
ವ್ರಜೇತಿ ರಾಮಃ ಪಿತರಮಭಿವಾದ್ಯಾಭ್ಯಯಾದ್‍ಗೃಹಮ್
ಪ್ರವಿಶ್ಯ ಚಾತ್ಮನೋ ವೇಶ್ಮ ರಾಜ್ಞೋದ್ದಿಷ್ಟೇಽಭಿಷೇಚನೇ
ತತ್ಕ್ಷಣೇನ ಚ ನಿಷ್ಕ್ರಮ್ಯ ಮಾತುರಂತಃಪುರಂ ಯಯೌ
ತತ್ರ ತಾಂ ಪ್ರವಣಾಮೇವ ಮಾತರಂ ಕ್ಷೌಮವಾಸಿನೀಮ್
ವಾಗ್ಯತಾಂ ದೇವತಾಗಾರೇ ದದರ್ಶಾಯಾಚತೀಂ ಶ್ರಿಯಮ್
ಪ್ರಾಗೇವ ಚಾಗತಾ ತತ್ರ ಸುಮಿತ್ರಾ ಲಕ್ಷ್ಮಣಸ್ತಥಾ
ಸೀತಾ ಚಾನಾಯಿತಾ ಶ್ರುತ್ವಾ ಪ್ರಿಯಂ ರಾಮಾಭಿಷೇಚನಮ್
ತಸ್ಮಿನ್ ಕಾಲೇ ಹಿ ಕೌಸಲ್ಯಾ ತಸ್ಥಾವಾಮೀಲಿತೇಕ್ಷಣಾ
ಸುಮಿತ್ರಯಾನ್ವಾಸ್ಯಮಾಣಾ ಸೀತಯಾ ಲಕ್ಷ್ಮಣೇನ ಚ
ಶ್ರುತ್ವಾ ತು ಪುಷ್ಯೇ ಪುತ್ರಸ್ಯ ಯೌವರಾಜ್ಯಾಭಿಷೇಚನಮ್
ಪ್ರಾಣಾಯಾಮೇನ ಪುರುಷಂ ಧ್ಯಾಯಮಾನಾ ಜನಾರ್ದನಮ್
ತಥಾ ಸನಿಯಮಾಮೇವ ಸೋಽಭಿಗಮ್ಯಾಭಿವಾದ್ಯ ಚ
ಉವಾಚ ವಚನಂ ರಾಮೋ ಹರ್ಷಯಂಸ್ತಾಮನಿಂದಿತಾಮ್
ಅಂಬ ಪಿತ್ರಾ ನಿಯುಕ್ತೋಽಸ್ಮಿ ಪ್ರಜಾಪಾಲನಕರ್ಮಣಿ
ಭವಿತಾ ಶ್ವೋಽಭಿಷೇಕೋಽಯಂ ಯಥಾ ಮೇ ಶಾಸನಂ ಪಿತುಃ
ಸೀತಯಾಪ್ಯುಪವಸ್ತವ್ಯಾ ರಜನೀಯಂ ಮಯಾ ಸಹ
ಏವಮೃತ್ವಿಗುಪಾಧ್ಯಾಯೈಃ ಸಹ ಮಾಮುಕ್ತವಾನ್ ಪಿತಾ
ಯಾನಿ ಯಾನ್ಯತ್ರ ಯೋಗ್ಯಾನಿ ಶ್ವೋಭಾವಿನ್ಯಭಿಷೇಚನೇ
ತಾನಿ ಮೇ ಮಂಗಲಾನ್ಯದ್ಯ ವೈದೇಹ್ಯಾಶ್ಚೈವ ಕಾರಯ
ಏತತ್ಶ್ರುತ್ವಾ ತು ಕೌಸಲ್ಯಾ ...
ಇಲ್ಲಿ ರಾಮ ಬಂದು ಅವನ ತಾಯಿಗೆ, "ಸೀತಯಾಪ್ಯುಪವಸ್ತವ್ಯಾ...", ಅಂದರೆ ಸೀತೆಯೊಡನೆ ಈ ರಾತ್ರೆ ನಾನು ಉಪವಾಸ ಇರಬೇಕು ಎಂದು ಹೇಳುತ್ತಾನೆ. ಕೌಸಲ್ಯೆ ರಾಮ ಸೀತೆಯರನ್ನು ಕೂರಿಸಿ ಉಣಬಡಿಸಿದ ವಿಷಯ ಇಲ್ಲಿಲ್ಲ.

ಎರಡನೆಯ ಸಂದರ್ಭದ ಶ್ಲೋಕಗಳು ಈ ರೀತಿ ಇವೆ -
...
ದದೃಶುಶ್ಚಾಶ್ರಮೇ ರಾಮಂ ಸ್ವರ್ಗಚ್ಯುತಮಿವಾಮರಮ್
ಸರ್ವಭೋಗೈಃ ಪರಿತ್ಯಕ್ತಂ ರಾಮಂ ಸಂಪ್ರೇಕ್ಷ್ಯ ಮಾತರಃ
ಆರ್ತಾ ಮುಮುಚುರಶ್ರೂಣಿ ಸಸ್ವರಂ ಶೋಕಕರ್ಶಿತಾಃ
ತಾಸಾಂ ರಾಮಃ ಸಮುತ್ಥಾಯ ಜಗ್ರಾಹ ಚರಣಾನ್ ಶುಭಾನ್
ಮಾತೄಣಾಂ ಮನುಜವ್ಯಾಘ್ರಃ ಸರ್ವಾಸಾಂ ಸತ್ಯಸಂಗರಃ
ತಾಃ ಪಾಣಿಭಿಃ ಸುಖಸ್ಪರ್ಶೈಃ ಮೃದ್ವಂಗುಲಿತಲೈಃ ಶುಭೈಃ
ಪ್ರಮಮಾರ್ಜೂ ರಜಃ ಪೃಷ್ಟಾದ್ರಾಮಸ್ಯಾಯತಲೋಚನಾಃ

ಇಲ್ಲಿ ರಾಮನ ಧೂಳನ್ನು ಕೊಡವಿದವರು ಮಾತರಃ, ಅಂದರೆ ಬಹುವಚನದ (ದ್ವಿವಚನವೂ ಅಲ್ಲದ!) ತಾಯಂದಿರು! ಅಂದರೆ, ಕೌಸಲ್ಯೆ ಮಾತ್ರ ಅಲ್ಲ, ಕೌಸಲ್ಯೆ ಸುಮಿತ್ರೆಯರೂ ಅಲ್ಲ, ಕೌಸಲ್ಯೆ, ಸುಮಿತ್ರೆ, ಕೈಕೇಯಿಯರು!
ಈ ಸಂದರ್ಭಗಳು ಇಲ್ಲಿ ಕನಿಷ್ಠ ಪಕ್ಷ ನನ್ನ ರಾಮಾಯಣದ ಆವೃತ್ತಿಯಿಂದ ಬೇರೆಯಾಗಿ ಇಳಿದು ಬಂದಿವೆ. ಇವು ಬೇರೆ ಯಾವುದಾದರೂ ರಾಮಾಯಣದವಾಗಿರಬಹುದು.
May 17, 2008 12:24 PM

ಸುಪ್ತದೀಪ್ತಿ suptadeepti said...
ತುರಂಗ, ನಮಸ್ಕಾರ. ಸ್ವಾಗತ.
ನಿಮ್ಮ ವಿವರಣೆಗೆ, ಉದಾಹರಣೆಗೆ ಧನ್ಯವಾದಗಳು.
ನಾನಿಲ್ಲಿ ಬರೆದದ್ದು ಡಾ. ಲಕ್ಷ್ಮೀನಾರಾಯಣ ಭಟ್ಟರ ಭಾಷಣದ ತುಣುಕು. ಯಾವ ರಾಮಾಯಣದಲ್ಲಿ ಈ ಸಂದರ್ಭಗಳು ವರ್ಣಿಸಲ್ಪಟ್ಟಿದ್ದವು ಎಂಬುದು ನಾನರಿಯೆ.
May 17, 2008 1:17 PM

sritri said...
ದುಡಿಮೆಯ ಬೆನ್ನುಹತ್ತಿ ಓಡಬೇಕಾಗಿರುವ ಇಂದಿನ ಮಾತಾಪಿತರಿಗೆ ಹೃದಯದ ಭಾಷೆ ಇರಲಿ, ಮಕ್ಕಳ ಬಾಲಭಾಷೆಯನ್ನೂ ಕೇಳಿಸಿಕೊಳ್ಳಲು ಪುರುಸೊತ್ತಿಲ್ಲವಾಗಿದೆ. ಮಕ್ಕಳನ್ನು ಪ್ರೀತಿಸುವುದು ಎಂದರೆ, ಅವರು ಕೇಳಿದ್ದನ್ನು ಕೊಡಿಸುವುದು ಎಂಬ ಯಾಂತ್ರಿಕ ಯುಗ ಬಂದಿದೆ. ಜ್ಯೋತಿ, ಸುಂದರ ಭಾವನೆಗಳನ್ನು ಹೊರಹೊಮ್ಮಿಸುವ ಸೊಗಸಾದ ಲೇಖನಕ್ಕೆ ಅಭಿನಂದನೆ.
May 18, 2008 10:29 AM

ಸುಪ್ತದೀಪ್ತಿ suptadeepti said...
ಹೌದು ವೇಣಿ. ಯಾಂತ್ರಿಕ ಬದುಕಿನ ವೇಗದೊಂದಿಗೆ ಓಡುತ್ತಿರುವ ಎಲ್ಲ ಹೆತ್ತವರ/ ಪೋಷಕರ ದುಗುಡವೂ ಅದೇ ಇರಬಹುದು... ಕೆಲವರಿಗೆ ಈ ವೇಗದ ಬದುಕು ಅನಿವಾರ್ಯವಾದರೆ ಇನ್ನು ಕೆಲವರಿಗೆ ಪ್ರತಿಷ್ಠೆಯ ಸಂಕೇತವಾಗಿರುವುದು ಮಾತ್ರ ಆಧುನಿಕತೆಯ ದುರಂತ.
ಪ್ರತಿಕ್ರಿಯೆಗೆ ಧನ್ಯವಾದಗಳು.
May 18, 2008 5:29 PM

ಗುರಿ

Sunday, May 11, 2008

ಮತ್ತೆ ಅಮ್ಮನೆಡೆಗೆ, ಜೀವಕೊಟ್ಟ ಉಡಿಗೆ,
ಮಲಗಲೊಮ್ಮೆ ಮಡಿಲಿನೊಳಗೆ, ಮಣಿಯಲವಳ ಅಡಿಗೆ...


ಗುರುತರಿಯದ ಹಾದಿಯಲ್ಲಿ
ನಡೆದ ಒಂದು ಪಯಣದಲ್ಲಿ
ಪಾದ ತಳದ ಗೆರೆಗಳು
ಬಾಳ ದಾರಿ ಅರೆಗಳು

ತಿರುತಿರುಗಿದ ಅಲೆತದಲ್ಲಿ
ಮರಳಿ ಹೊರಳಿ ಮೊರೆತದಲ್ಲಿ
ಕಂಡ ಕನಸಿನೆಳೆಗಳು
ಉಂಡ ಹರುಷದಲೆಗಳು

ತೇಗಿದಾಗ ಎದ್ದು ನಡೆದು
ಬಾಗಿದಾಗ ಮತ್ತೆ ಪಡೆದು
ಬಳಲಿ ಗೆದ್ದ ಕ್ಷಣಗಳು
ಅಳಲ ಮರೆವ ಮನಗಳು

ಮುಂದೆ ಇರುವ ತಿರುವ ನೆನೆದು
ನಡೆಯದಿರುವ ತಿಟ್ಟ ಒಡೆದು
ಸಾಗುವವರು ಕಲಿಗಳು
ಛಲವ ಬಿಡದ ಹುಲಿಗಳು

ಮತ್ತೆ ಮತ್ತೆ ಅಮ್ಮನುಡಿಗೆ
ಸೆಳೆತವಿಹುದು ಮಣ್ಣಿನೆಡೆಗೆ
ಚಿತ್ತ ಒಂದು ದಿಕ್ಕಿಗೆ
ಉಸಿರ ಹಾಸು ಅಲ್ಲಿಗೆ
(೧೮-ಡಿಸೆಂಬರ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:01 AM
Labels: ,

13 ಪತ್ರೋತ್ತರ:
ಶ್ರೀವತ್ಸ ಜೋಶಿ said...
ಕವನವೆಂದರೆ ಇದು!ಚೆನ್ನಾಗಿದೆ.
May 11, 2008 4:25 AM

ಮನಸ್ವಿನಿ said...
ಚಂದ ಇದೆ ಈ ಕವನ. ರಾಗ ಸಂಯೋಜನೆಗೆ ರೆಡಿ ಇದ್ದ ಹಾಗಿದೆ.
May 11, 2008 8:35 AM

ಸುಪ್ತದೀಪ್ತಿ suptadeepti said...
ಮೆಚ್ಚುಗೆಗೆ ಧನ್ಯವಾದಗಳು ಶ್ರೀವತ್ಸ ಮತ್ತು ಮನಸ್ವಿನಿ.
ರಾಗ ಸಂಯೋಜಿಸಿ ಹಾಡ್ತಿರು, ಕೇಳೋದಕ್ಕೆ ಬರ್ತೇನೆ, ಸು.
May 11, 2008 7:35 PM

ತೇಜಸ್ವಿನಿ ಹೆಗಡೆ said...
ಅಕ್ಕಾ,
ಸ್ಫೂರ್ತಿ ನೀಡುವ ಕವನ..
ಮುಂದೆ ಇರುವ ತಿರುವ ನೆನೆದು
ನಡೆಯದಿರುವ ತಿಟ್ಟ ಒಡೆದು
ಸಾಗುವವರು ಕಲಿಗಳು
ಛಲವ ಬಿಡದ ಹುಲಿಗಳು

ಈ ಸಾಲುಗಳನ್ನು ಸದಾ ನೆನಪಿಟ್ಟುಕೊಳ್ಳುವೆ.
May 12, 2008 3:23 AM

ಸುಪ್ತದೀಪ್ತಿ suptadeepti said...
ಧನ್ಯವಾದ ತೇಜು. ಬ್ಲಾಗ್ ಲೋಕಕ್ಕೆ ಮರುಸ್ವಾಗತ.
May 12, 2008 10:29 AM

ಶಾಂತಲಾ ಭಂಡಿ said...
ಸುಪ್ತದೀಪ್ತಿಯವರೆ...
ಒಂದೇ ಒಂದು ಸರಳ ಸಾಲಿನ ಹಾಗೆ ಇಡಿಯ ಕವಿತೆ! ಓದಿದರೆ ಸಾಕು, ಸುಮ್ಮನೆ ತನ್ನರ್ಥವ ನನ್ನಂಥವಗೂ ತಿಳಿಸಿಬಿಡುವ ಹಾಗೆ. ಬರೆಯುತ್ತಲಿರಿ. ಓದಿಕೊಂಡಿದ್ದುಬಿಡುತ್ತೇನೆ.
May 12, 2008 11:35 AM

ಸುಪ್ತದೀಪ್ತಿ suptadeepti said...
ಧನ್ಯವಾದ ಶಾಂತಲಾ. ನಾನು ಬರೆಯುತ್ತೇನೆ, ಅದೊಂದು ತೆವಲು. ತಪ್ಪಿಸಿಕೊಳ್ಳಲಾರೆ. ಓದಲು ನೀವೆಲ್ಲ ಇದ್ದೀರಲ್ಲ, ಸಾಕು.
May 12, 2008 1:30 PM

Anonymous said...
cenaagide. eega oodide
-mala
May 12, 2008 5:16 PM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಮಾಲಾ.
May 12, 2008 9:42 PM

Anonymous said...
ಇಲ್ಲಿಯವರೆಗಿನ ಬದುಕನ್ನ ಹೊರಳಿ ನೋಡುತ್ತಲೇ, ಕಾಡುವ ನೆನಪುಗಳೊಂದಿಗೆ ಮುಂದಿನ ದಿನಗಳನ್ನ ಎದುರುಗೊಳ್ಳುವ ಬಗೆಯನ್ನ ಸರಳ ಸಾಲುಗಳಲ್ಲಿ ಬಿಂಬಿಸಿದ್ದೀರಿ.
ಕವನ ತುಂಬಾ ಚೆನ್ನಾಗಿದೆ.
ಶುಭವಾಗಲಿ,
ಮೋಹನ ಬಿಸಲೇಹಳ್ಳಿ
May 13, 2008 8:27 PM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಮೋಹನ್
May 13, 2008 8:28 PM

sunaath said...
ಮನಸ್ಸನ್ನು ಗೆದ್ದುಕೊಳ್ಳುತ್ತಿದೆ ಈ ಕವನ. ಅಭಿನಂದನೆಗಳು, ಜ್ಯೋತಿ.
-ಸುನಾಥ ಕಾಕಾ
May 15, 2008 10:20 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಕಾಕಾ. ನೀವೂ ಹೀಗೆ ಹೊಗಳಿದರೆ ನನಗೆ ಕೊಂಬು ಮೂಡಬಹುದು.
May 15, 2008 11:03 AM

ಉಗಮಾಗಮ

Tuesday, May 6, 2008

ಜೀವತಂತುವೊಂದರಿಂದ ಬಂದ ಉಗಮ, ಜೀವಾಗಮ,
ಮಿಂಚಿನೆಳೆಗೆ ಕಾದ ಇಳೆಗೆ ಹರಿದ ಸುರಿದ ವಿಕ್ರಮ;
ಏಕತಾನದಿಂದ ಸರಿದ ಸಂಗಮದಲಿ ಸರಿ-ಸರಿಗಮ,
ಜೋಡು ಭಿನ್ನ ತಂತುಗಳಿಗೆ ಮತ್ತ ಮುತ್ತ ವಿಭ್ರಮ;
ಚುಂಬಿಸಿದರೆ ಚಾತಕದೊಲು, ಚೇತರಿಸಲು ಚಂಚಲದೊಳು-
ಪುಟಿಯುವೆದೆಗೆ ತುಟಿಯೊತ್ತಲು ಕಾದಿರುವದು ಸಂಭ್ರಮ.

ಸುರಲೋಕದ ತೃಣ ಕಣದಲಿ, ನೀಹಾರಿಕೆಯೆದೆಗೂಡಲಿ
ಲೌಕಿಕ ರತಿ ಲಾಸ್ಯಗಳಲಿ, ಅಲೌಕಿಕದ ಭಾಷ್ಯಗಳಲಿ,
ಸೌಂದರ್ಯದ ಮೂರ್ತಗಳಲಿ, ರೌದ್ರತೆಯತಿ ರೂಪಗಳಲಿ,
ರಿಂಗಣಿಸುವ ದನಿಯೆಡೆಯಲಿ, ಮೌನಹೆಣೆದ ಬಿಡುಜಡೆಯಲಿ
ಯಂತ್ರ-ತಂತ್ರದೊಳಗೆ ಮಂತ್ರ ಉದ್ಗರಿಸುವ ಮಾಂತ್ರಿಕತೆಯ-
ಮೋಡಿ ಮಾಡಿ ಮಾಯೆಯಾಗಿ, ನವ್ಯ ಪ್ರಭೆಯು ಮರಳಲಿ.

ಹೊಸರೂಪಿನ ಹೊಸ ಚೇತನ, ಹೊಸತನದಲಿ ಹೊಸ ಚಿಂತನ,
ರಮ್ಯಗಾನ ಧ್ಯಾನತಾನ ಬರಸೆಳೆಯುವ ಅಭಿಸೇಚನ;
ಅನುರಕ್ತಿಯೊಳಾರತಿಯಿದು, ಅಣುರೇಣುವಿನಾತ್ಮತನ,
ಅವನಿಜೆಯಲಿ ಆತ್ಮಜನಲಿ ಝೇಂಕರಿಸುವ ಓಂತನನ,
ಸಂಧಿಸಿದವು ವಿಂಗಡಿಸಲು, ವಿವಿಧತೆಗಳ ನೋಂಪಿಯೊಳಗೆ-
ಅಚ್ಚರಿಯಿದು ಸೋಜಿಗವಿದು, ಜೀವವುದಿಪ ನರ್ತನ.
(೧೭-ಫೆಬ್ರವರಿ-೨೦೦೪)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:34 PM
Labels: ,

9 ಪತ್ರೋತ್ತರ:
sritri said...
ಜೀವ ಉದಿಪ ಅಚ್ಚರಿಗಳ ಬಿಚ್ಚಿಡುವ ವೈಜ್ಞಾನಿಕ ಕವನ! ಜೀವವುದಿಪ ......ನರ್ತನ..ಎನ್ನುವ ಪದ ಯಾಕೋ ಸರಿಹೋಗಲಿಲ್ಲ ಅನಿಸಿತು. ಹರಿವ ಲಹರಿಯಲ್ಲಿ ಮತ್ತೆ ಕವನದ ಝರಿ ಕಂಡು ಖುಷಿಯಾಯಿತು.
May 7, 2008 7:00 AM

ಸುಪ್ತದೀಪ್ತಿ suptadeepti said...
`ಜೀವವುದಿಪ ನರ್ತನ' ಅನ್ನುವುದನ್ನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ, ಅದರ ಹಿಂದಿನ ಸಾಲಿನ (ಸಂಧಿಸಿದವು ವಿಂಗಡಿಸಲು, ವಿವಿಧತೆಗಳ ನೋಂಪಿಯೊಳಗೆ) ಮುಂದರಿಕೆಯಾಗಿ.
ಜೀವಕೋಶದೊಳಗೆ ವರ್ಣತಂತು (ಕ್ರೋಮೋಸೋಮ್)ಗಳ ಚಲನೆ ಯಾವುದೋ ಅಲೌಕಿಕ ನರ್ತನದಂತೆಯೇ ಭಾಸವಾಗುವುದರಿಂದ ಹಾಗೆ ಬರೆದೆ.
ಪ್ರತಿಕ್ರಿಯೆಗೆ ಧನ್ಯವಾದಗಳು, ವೇಣಿ.
May 7, 2008 4:54 PM

Anonymous said...
ಕವನ ತುಂಬಾ ಇಷ್ಟವಾಯಿತು. ಜೀವಸೃಷ್ಟಿಯ ಪ್ರಕ್ರಿಯೆಯನ್ನ ವಿಜ್ಞಾನಿಯ ದೃಷ್ಟಿಯಲ್ಲಿ, ಕವಿಯತ್ರಿಯ ಕಲ್ಪನೆಗಳನ್ನ ಭಾವಪೂರ್ಣ ಪದಲಾಸ್ಯದಲ್ಲಿ ಹಿಡಿದಿಟ್ಟಿರುವ ’ಸಂಗಮಾಗಮ’ ಈ ’ಉಗಮಾಗಮ’.
ಧನ್ಯವಾದಗಳು,
ಮೋಹನ ಬಿಸಲೇಹಳ್ಳಿ
May 7, 2008 6:03 PM

ಸುಪ್ತದೀಪ್ತಿ suptadeepti said...
ಸ್ವಾಗತ ಮತ್ತು ಧನ್ಯವಾದ ಮೋಹನ್. ಹೀಗೇ ಬರುತ್ತಿರಿ, ಓದಿ, ಆಸ್ವಾದಿಸಿ, ಪ್ರತಿಕ್ರಿಯೆ ಬರೆಯುತ್ತಿರಿ.
May 7, 2008 6:22 PM

phonon said...
ಪುಟಿಯುವೆದೆಗೆ ತುಟಿಯೊತ್ತಲು ಕಾದಿರುವದು ಸಂಭ್ರಮ- ಈ ಸಾಲುಗಳು ಹುಬ್ಬೀರುವಂತೆ ಮಾಡಿತು!.
ಸೃಷ್ಟಿ ಕ್ರಿಯೆಯನ್ನು ಶರೀರ-ರಸಾಯನ ಶಾಸ್ತ್ರದಿಂದ ವಿವರಿಸಿದ್ದಿರಿ. ಸೃಜನಾತ್ಮಕ ವಿವರಣೆಗೆ ಇನ್ನಸ್ಟು ಆಸ್ಪದ ಇತ್ತು ಎಂದು ನನ್ನ ಭಾವನೆ. ಲೌಕಿಕ ರತಿ ಲಾಸ್ಯಗಳಲಿ..- ಇಲ್ಲಿ ಲೌಕಿಕ ಎನ್ನುವ ಪದ ಮುಂದಿನ ಪದಲಾಸ್ಯಗಳ ತೀವ್ರತೆಯನ್ನು ಕಡಿಮೆ ಮಾಡಿದೆ ಎಂದು ಅನ್ನಿಸುತ್ತದೆ. ಏಕೆಂದರೆ, ರತಿ ಲಾಸ್ಯದ ಸಂದರ್ಭದಲ್ಲಿ ಅದು ಲೌಕಿಕವೋ ಅಥವಾ ಅಲೌಕಿಕವೋ ಎನ್ನುವ ಸಂಶಯ ಮೂದಿದರೆ, ಅಲ್ಲಿ ತಲ್ಲೀನತೆ ಇರಲಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಒಟ್ಟಾರೆ ಬಹಳ ದಿನಗಳ ನಂತರ ಒಂದು ಕವನ ಇಸ್ತವೈತು ನನಗೆ.
D.M.Sagar
May 8, 2008 3:16 PM

ಸುಪ್ತದೀಪ್ತಿ suptadeepti said...
ಸಾಗರ್, ಪ್ರತಿಕ್ರಿಯೆಗೆ ಧನ್ಯವಾದಗಳು. ಕವನ ಇಷ್ಟವಾದುದಕ್ಕೂ ಸಹ.
ಇಲ್ಲಿ ಹುಬ್ಬೇರುವಂಥ ಆಶ್ಚರ್ಯಕರವಾದುದು ಏನಿದೆಯೋ ಗೊತ್ತಾಗಲಿಲ್ಲ.
ಸೃಷ್ಟಿಕ್ರಿಯೆ ಲೌಕಿಕ ಮತ್ತು ಅಲೌಕಿಕಗಳ ಸಂಗಮ. ಅದನ್ನು ಇಲ್ಲಿ ಹೇಳಲಿಚ್ಛಿಸಿದ್ದೇನೆ. ಹೊರತಾಗಿ `ರತಿಲಾಸ್ಯ ಲೌಕಿಕ' ಅನ್ನುವ ಕಟ್ಟುಪಾಡು ಕೊಟ್ಟಿಲ್ಲ. ಮೊತ್ತಮೊದಲ ಡಿ.ಎನ್.ಎ. ಹುಟ್ಟಿಕೊಂಡಾಗಿನಿಂದ ಪ್ರಕೃತಿಯಲ್ಲಿನ ಎಲ್ಲ ಸಸ್ಯ-ಜೀವಿಗಳ ಆಗಮ-ಉಗಮಗಳ ಒಟ್ಟು ಪ್ರಾತಿನಿಧಿಕ ಬಿಂಬ ಈ ಕವನ. ಮಾನುಷ ನೆಲೆಯೊಂದೇ ಉದ್ದೇಶವಲ್ಲ, ಸ್ಫೂರ್ತಿಯೂ ಅಲ್ಲ.
ಇತ್ತೀಚೆಗೆ ನಿನ್ನೊಂದಿಗೆ ಮಾತಾಡುತ್ತಾ ದೃಷ್ಟಿಕೋನಗಳು ಬೇರೆ ಬೇರೆ ಇರುವ ಬಗ್ಗೆ ಹೇಳಿದ್ದೆ. ಇಲ್ಲೂ ಅದೇ ಆಗಿದೆಯೆಂದು ಕಾಣುತ್ತದೆ.
May 8, 2008 11:21 PM

ಶ್ರೀವತ್ಸ ಜೋಶಿ said...
ಉನ್ನತದರ್ಜೆಯ ಕವಿತೆಗಾಗಿ ಜ್ಯೋತಿಯವರಿಗೆ ಅಭಿನಂದನೆಗಳು!
ಈ ಕವಿತೆ ಇನ್ನೂ ಮೇಲ್ಮಟ್ಟಕ್ಕೇರುತ್ತಿತ್ತು...
೧) ಅಲ್ಪವಿರಾಮ, ಅರ್ಧವಿರಾಮ, ಪೂರ್ಣವಿರಾಮ ಚಿಹ್ನೆಗಳನ್ನು ಬಳಸದಿದ್ದರೆ.
೨) ಪದಲಾಲಿತ್ಯದ ಜತೆಯಲ್ಲಿ ತಾಳ-ಲಯಗಳಿಗೂ ಸ್ವಲ್ಪ ಗಮನ ಹರಿಸಿದ್ದರೆ (ಉದಾ: ಮೊದಲ ೨ ಸಾಲುಗಳನ್ನು ಓದಿದ ಮೇಲೆ ೩ನೇ ಸಾಲಿನಲ್ಲಿ ಸರಿ-ಸರಿಗಮ ಎಂದಿರುವುದು ಲಯಕ್ಕೆ ತೊಡಕಾಗುತ್ತದೆ. ಸರಿಗಮ ಎಂದಷ್ಟೇ ಇದ್ದರೆ ಸರಿಹೋಗುತ್ತದೆ, ನಾಲ್ಕನೆಯ ಸಾಲು ಅದೇ ಲಯಕ್ಕೆ ಸರಿಹೊಂದುತ್ತದೆ).
೩) ಒಂದನೇ ಮತ್ತು ಮೂರನೇ ಭಾಗಗಳು ವಿಶೇಷಣ-ನಾಮಪದ ಸಂಯೋಗ ಪದಪುಂಜಗಳನ್ನು ಬಳಸಿದ ಚಿತ್ರಣಗಳಾದರೆ ಎರಡನೆಯ ಭಾಗವು ಆಜ್ಞಾರ್ಥಕ ಧಾಟಿಯಲ್ಲಿದೆ. ಹೀಗಿರುವ ಬದಲು ಅದೂ ಇನ್ನುಳಿದ ಎರಡು ಭಾಗಗಳಂತೆಯೇ ಇದ್ದಿದ್ದರೆ.
೪) ’ಅಭಿಸೇಚನ’ ವನ್ನು ’ಅಭಿಸಿಂಚನ’ ಎಂದು ಬರೆದಿದ್ದರೆ ಮತ್ತು ಅದು ’ಹೊಸ ಚಿಂತನ’ಕ್ಕೆ ಸನ್ನಿಹಿತಪ್ರಾಸವಾಗುವಂತೆ ನೋಡಿಕೊಂಡಿದ್ದರೆ. (ಹಾಗೆಯೇ, "ಹೊಸರೂಪಿನ ಹೊಸ ಚೇತನ ಹೊಸತನದಲಿ ಚಿಂತನ ರಮ್ಯಗಾನ ಧ್ಯಾನತಾನ ಬರಸೆಳೆಯುವ ಅಭಿಸಿಂಚನ" ಅಂತಿದ್ದರೆ ಸಂಗೀತಕ್ಕೆ ಅಳವಡಿಸಲು ಸುಲಭವಾಗಿರೋದು)
೫) ’ವಿವಿಧತೆಗಳ’ ಪದದ ಬದಲಿಗೆ ’ವೈವಿಧ್ಯದ’ ಎಂದು ಬರೆದಿದ್ದರೆ.
=======
ಮೌನ "ಹೆಣೆದ" "ಬಿಡು" ಜಡೆ = ?(ಹೆಣೆದಿದ್ದರೂ ಬಿಡಿಸಿದಂತಿರುವ?)
=======
May 10, 2008 3:02 AM

sunaath said...
ಜ್ಯೋತಿ,
ನೀನು ಬರೆದ ಗೇಯ ಕವನಗಳಿಗಿಂತ ಭಿನ್ನವಾದ ಕವನ. ವೈಚಾರಿಕತೆಯನ್ನು ಅಂದವಾಗಿ ಹುದುಗಿಸಿಕೊಂಡ ಕವನ.
ಅಭಿನಂದನೆಗಳು.
-ಕಾಕಾ
May 10, 2008 10:11 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಶ್ರೀವತ್ಸ ಮತ್ತು ಕಾಕಾ.

ವತ್ಸ, ನಿಮ್ಮ ಪ್ರತಿಕ್ರಿಯೆಗಳನ್ನು ಗಾಂಭೀರವಾಗಿಯೇ ಪರಿಗಣಿಸುತ್ತೇನೆ.
ಇದರ ಸಂದೇಶ ಮುಖ್ಯವಾಗಿದೆಯೇ ಹೊರತು ಇದರ ಗೇಯತೆಯಲ್ಲ. ತನಗೆ ತಾನೇ "ಬರೆಸಿಕೊಂಡ" ಕವನಗಳಲ್ಲಿ ಇದೂ ಒಂದು. ಅಂಥ ಕವನಗಳ ಪದಪುಂಜಗಳಲ್ಲಿ ಬದಲಾವಣೆ ಮಾಡುವ ಪ್ರಯತ್ನ ನಾನು ಮಾಡುವುದು ಕಡಿಮೆ.ಇದೇ ವಿವರಣೆ ಚಿತ್ರಕ ನುಡಿ/ ಆಜ್ಞಾರ್ಥಕ ನುಡಿ- ಪ್ರಶ್ನೆಗೂ.
ಇದರ ಅರ್ಥ-ಸಂದೇಶಕ್ಕೆ ವಿರಾಮ ಚಿಹ್ನೆಗಳಿದ್ದರೆ ಉತ್ತಮ ಅನಿಸಿದ್ದರಿಂದ, ಹಾಗೇ ಬರೆದಿದ್ದೆ. ನಾಲ್ಕು ವರ್ಷಗಳ ಹಿಂದೆ ಬರೆದದ್ದನ್ನು ಈಗ ಹಾಗೇ ಪ್ರಕಟಿಸಿದೆ."ಸರಿ-ಸರಿಗಮ" ಅನ್ನುವುದು "ಸರಿಯಾದ ಸ-ರಿ-ಗ-ಮ" ಅನ್ನುವರ್ಥದಲ್ಲಿ. ಲಯಕ್ಕಾಗಿ ಹಾಡುವವರು ಹೊಂದಿಸಿಕೊಳ್ಳುತ್ತಾರೆ. ಅಭಿಸೇಚನ ಪದ ಇಲ್ಲಿ ಸನ್ನಿಹಿತ ಪ್ರಾಸ ಅಥವಾ ಗೇಯತೆಗಿಂತಲೂ ಮಿಗಿಲಾಗಿ, ಅರ್ಥವ್ಯಾಪಿಯ ದೃಷ್ಟಿಯಲ್ಲಿ ಸೂಕ್ತವೆನ್ನಿಸುತ್ತಿದೆ.
ವಿವಿಧತೆ/ ವೈವಿಧ್ಯ -- ಅಂಥ ವ್ಯತ್ಯಾಸವೇನಿಲ್ಲ.
"ಮೌನಹೆಣೆದ ಬಿಡುಜಡೆಯಲಿ"= ಮೌನವೇ ಹೆಣೆದುಕೊಂಡ ಬಿಡುಜಡೆ.
May 11, 2008 8:05 PM

ಅಮರಾ....ವತಿ

Wednesday, April 16, 2008

ಅವಕಾಶಗಳ ಅಮರಾವತಿಯಲ್ಲಿ
ಗೋರಿಗಳು ಸಾವಿರಾರು
ಒಕ್ಕಣ್ಣ ವಿಕಲಾಂಗರ ನಡುವೆ
ಹತ ಭಾಗ್ಯ ಚೇತನರು
ಶೋಕ, ನಗೆಬುಗ್ಗೆ ಒಸರುಗಳ
ಕೋಶಗಳೊಳಗೆ ನಿರ್ವಾತ
ಸದ್ದೇ ಇರದ ಗದ್ದಲ
ಗೊಂದಲ, ಬಿಳಿ
ಮನೆ ಮನೆಯಲ್ಲಿ
ಕತ್ತಲೆಗೇ ಮೆತ್ತಿದ ಹಸುರು
ಕಾಣದ ನೆಲದಲ್ಲಿ ನೆತ್ತರು
ಯಾರ ಕೈವಾಡಕ್ಕೆ ಮತ್ತಾರ ಹೆಸರು
ವಿತ್ತಚೇತನದ ಅಡಿಪಾಯದಲ್ಲಿ
ಹೆಗ್ಗಣಗಳ ಗೂಡು
ಪಾರಿವಾಳವಿರದ ಮಾಡು
ಹೊಸನಗೆಯ ಸಮಾಧಿಯಲ್ಲಿ
ಹಳೆಹುಲಿಗಳ ದರಬಾರು
ನೆತ್ತಿ ಕಾಯುವ ದೈವ ಅವ-
ನೆತ್ತಿ ಕುಕ್ಕಿದರೆ
ಕಾವನಾರು?
(೯-೧೧'ರ ದುರಂತ, ತದನಂತರದ ಅಫ್ಘಾನ್ ಯುದ್ಧ, ಆಮೇಲಿನ ಇರಾಕ್ ಯುದ್ಧ... ಇವೆಲ್ಲದರ ಕಾರಣ, ಪರಿಣಾಮಗಳ ಚಿಂತನೆಯಲ್ಲಿ...)
(೧೬-ಎಪ್ರಿಲ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 3:40 AM
Labels: ,

6 ಪತ್ರೋತ್ತರ:
sunaath said...
ವ್ಯಂಗ, ಶೋಕ ಮಿಳಿತವಾದ ಸುಂದರ ಅಭಿವ್ಯಕ್ತಿ.
ಜ್ಯೋತಿ, ಕವಿತೆ ಓದಿದಾಗ ಅದರ ವಸ್ತುವಿನಿಂದ ದುಃಖವಾಯಿತು. ಚೆನ್ನಾಗಿ ಬರೆದಿರುವಿಯಮ್ಮ.
-ಕಾಕಾ
April 17, 2008 8:34 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಕಾಕಾ.
April 17, 2008 10:58 AM

myna said...
suptadeeptiyavare, arthapoornavada kavana kottideeri.
April 19, 2008 1:51 PM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಮೈನಾ.
April 19, 2008 10:46 PM

VENU VINOD said...
ಭಯೋತ್ಪಾದಕರ ಲೋಕದತ್ತ ವಾಲಿದ್ದೀರಿ ???
April 20, 2008 12:43 AM

ಸುಪ್ತದೀಪ್ತಿ suptadeepti said...
'ಆ ಲೋಕ' ಈ ಲೋಕದೊಳಗೆ ಹೇಗೆಲ್ಲ ಪರಿಣಾಮ ಬೀರಿದೆ ಅನ್ನುವತ್ತ ಒಂದು ಸಣ್ಣ ನೋಟ, ಹೌದು.
ಪ್ರತಿಕ್ರಿಯೆಗೆ ಧನ್ಯವಾದ, ವೇಣು.
April 20, 2008 12:24 PM

ದೇವ ರೂಪ

Thursday, April 10, 2008

ದೇವನೊಬ್ಬ ಶಕ್ತಿ ಸ್ವರೂಪ
ಇತ್ತೆವವಗೆ ನಮ್ಮಕಲ್ಪನೆಯ ರೂಪ
ಎಲ್ಲೋ ಎಷ್ಟೋ ಕೈ-ಕಾಲುಗಳು
ಯಾವ್ಯಾವುದೋ ತಲೆ
ಹೊಟ್ಟೆ, ಶಾಲುಗಳು.

ಗಂಭೀರ ಪ್ರಪಂಚದಲ್ಲಿ
ನಗುವಿಗೆ ಕಾರಣವಿರಲಿ
ಹಾಗೆಂದು ನೀರಾಗಿಸಿ
ಹರಿಸಿ ಬಿಡುವುದೇ
ಅವನ ಜುಟ್ಟನ್ನೆ? ಹೆಬ್ಬೆಟ್ಟನ್ನೆ?
ಒಡೆಯುವುದೇ ಹೊಟ್ಟೆಯನ್ನೆ?
ಆಮೇಲೆ ಅದಕೊಂದು
ಚಂದದ ಬಂಧ
ನಮ್ಮಂತೆಯೇ, ಪಾಪ...
ಅನ್ನುವ ಮರುಕದಿಂದ.

ಒಂದೇ ತಲೆಯ ನೋವಿಗೇ
ಬೆಂಡಾಗುವ ನನಗೆ
ಚತುರ್ಮುಖನ ಪರಿಸ್ಥಿತಿ
ನೆನೆದೇ ಹಾರುತ್ತದೆ ಗುಂಡಿಗೆ.

ಕಮಲನಯನ, ಕಮಲವದನ
ಕಮಲಚರಣನ ಕಮಲಾಕ್ಷಿಗೆ
ಕಮಲ ಬೆಳೆದ ಇವನ ನಾಭಿಯೇ
ಸರಸದ ಸರಸಿಯೆ?

ಮನೆಯೇ ಇಲ್ಲದ ಬೈರಾಗಿ
ಕಾಟ ತಡೆಯದಾಗಿ
ಮದುವೆಯಾದ, ಅವಳಿಗಾಗಿ
ತಾನೇ ಅರ್ಧಶರೀರಿಯಾದ

ಸ್ಯಾಂಪಲ್ ಮಾತ್ರ ಇವು
ಬೇರೇನೇನೋ ಇವೆ,
ಇಲ್ಲಿ ಹೇಳಲಾಗದಷ್ಟು.
ಉಳಿದದ್ದು ಇನ್ನೊಮ್ಮೆ
ಅನ್ನುವುದು ಸುಲಭ
ವಿಶೇಷರೂಪರ ಕೃಪೆಯಿರಲು.
(೦೭-ಎಪ್ರಿಲ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:20 PM
Labels: ,

12 ಪತ್ರೋತ್ತರ:
ಅರುಣ್ ಮಣಿಪಾಲ್ said...
;-) ...;-)
April 11, 2008 10:56 PM
ಸುಪ್ತದೀಪ್ತಿ suptadeepti said...
ಧನ್ಯವಾದ ಅರುಣ್.
ಆದ್ರೆ... ಹಾಗಂದ್ರೇನು?
April 12, 2008 12:02 AM

sunaath said...
ಗಂಡುದೇವರಗಳ ಮೇಲಿನ ಸಿಟ್ಟಿನಿಂದ ನಾವು ಅವರುಗಳನ್ನು ವಿರೂಪಗೊಳಿಸಿರಬಹುದೆ? ದೇವಿಯರು ಮಾತ್ರ ಚಂದವಾಗಿಯೇ ಇದ್ದಾರಲ್ಲ,ಜ್ಯೋತಿ!
-ಕಾಕಾ
April 12, 2008 8:16 AM

ಸುಪ್ತದೀಪ್ತಿ suptadeepti said...
ದೇವಿಯರ ರೂಪದ ಬಗ್ಗೆ, ಮೂರ್ತಿ-ಪ್ರತಿಮೆಗಳ ಬಗ್ಗೆ, ಅಂದ-ಅಲಂಕಾರಗಳ ಬಗ್ಗೆ, ಇಲ್ಲಿ ಹೇಳಲಾಗದಷ್ಟು ಅಸಂತೋಷವಿದೆ ಕಾಕಾ. ಇದನ್ನು ಮುಖತಃ (ಅಥವಾ ಫೋನಿನಲ್ಲಿ) ಮಾತಾಡುವಾಗ ಹೇಳಬಹುದಷ್ಟೇ ಹೊರತು ಇಲ್ಲಿ ಬರೆಯಲಾರೆ.
April 12, 2008 8:52 PM

ಅರೇಹಳ್ಳಿ ರವಿ Arehalli Ravi said...
ಸುಪ್ತದೀಪ್ತಿಯವರೆ, ಭಾರತಕ್ಕೆ ಬಂದಿರಾ? ಗೊತ್ತಾಗ್ತಿಲ್ಲ.
ವಿಕ್ರಮ್ ಬಂದರೆಂದು ತಿಳಿಯಿತು.
ರವೀ...ಒಂದು ಹೊಸ ಲೇಖನ::ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...
April 14, 2008 5:00 AM

ಸುಪ್ತದೀಪ್ತಿ suptadeepti said...
ರವಿಯವರೇ, ನಾನು ಇದ್ದಲ್ಲೇ ಇದ್ದೇನೆ; ಎಲ್ಲೂ ಹೋಗಿಲ್ಲ-ಬಂದಿಲ್ಲ. ಯಾಕೆ ಹಾಗೆ ಅಂದುಕೊಂಡಿರಿ?
ಲೇಖನದ ಲಿಂಕಿಗೆ ಧನ್ಯವಾದ. ಓದುತ್ತೇನೆ.
April 14, 2008 2:37 PM

srinivas said...
ಸ್ಯಾಂಪಲ್ಲೇ ಇಷ್ಟು ಸೊಗಸಾಗಿರುವಾಗ (ಎಲೆ ಕೊನೆಯಲ್ಲಿ ಬಡಿಸಿರುವುದು), ಇನ್ನು ಪೂರ್ಣ ಪ್ರಮಾಣ ಹೇಗಿರಬೇಕು. ಆತ್ಮವನ್ನು ತೋರಿಸಿ, ಪರಮಾತ್ಮನ ತುಣುಕು ಎಂದಿದ್ದೀರಿ, ಇನ್ನು ಪರಮಾತ್ಮನನ್ನು ತೋರಿಸುವುದು ಯಾವಾಗ :P ಎಷ್ಟೇ ನೀಳವಾಗಿರಲಿ, ಪೂರ್ಣಗೊಳಿಸಿ ನಮ್ಮ ಮುಂದಿಡಬೇಕೆಂದು ಕೋರುವೆ

ನಾ ಕಂಡ ದೈವ ಹೀಗಿದೆ :
ಅಂತರ್ಜಾಲ ನಿಸರ್ಗವೇ?
ನಿಸರ್ಗ ದೇವರೇ?
ಕಣ್ಣಿಗೆ ಕಾಣದು, ಕಿವಿಗೆ ಕೇಳದು,
ಮುಟ್ಟಲಾಗದು ನಿಸರ್ಗ
ಅಂತೆಯೇ ಅಂತರ್ಜಾಲ
ಇಂದ್ರಿಯಗಳಿಗೆ ನಿಲುಕದು
ಯಾರ ಕೈಗೂ ಸಿಲುಕದು
ಆದರೂ ತನ್ನ ಕರಾಮತ್ತು ತೋರುವುದು
ಜಾಲದಿ ಸಿಲುಕಿದವರು ಒಬ್ಬರನೊಬ್ಬರು
ನೋಡದವರು, ಅರಿಯದವರು,
ಆದರೂ ಚಿರಪರಿಚಿತರು
ಚಾಟು ಪದ್ಯ ತಿಳಿಯದ,
ಚಾಟ್ ತಿನ್ನದ ಮಂದಿಯೂ
ಚಾಟಿಸುವವರು ಚಿರಪರಿಚಿತರಂತೆ
April 14, 2008 5:49 PM

ಸುಪ್ತದೀಪ್ತಿ suptadeepti said...
ಶ್ರೀನಿವಾಸರೇ, ಧನ್ಯವಾದಗಳು.
"...ಇನ್ನು ಪರಮಾತ್ಮನನ್ನು ತೋರಿಸುವುದು ಯಾವಾಗ :P"
ಹೀಗಂದರೆ ಹೇಗೆ? ತಲೆತಗ್ಗಿಸಿ ಕ್ಷಮೆ ಕೋರುತ್ತೇನೆ- ಇದು ನನ್ನ ಹದ ಮೀರಿದ ವಿಷಯವೆಂದು. ಮಹಾ ಮಹಾ ಯೋಗಿ, ಜ್ಞಾನಿಗಳೇ ಪರಮಾತ್ಮನನ್ನು "ತೋರಿಸಲು" ಅಶಕ್ಯರಾಗಿರುವಾಗ ತೃಣಮಾತ್ರದ ನಾನ್ಯಾವಳು? ಕ್ಷಮೆಯಿರಲಿ.
ನಿಮ್ಮ ದೈವದ ಬಗ್ಗೆ ಎರಡು ಮಾತಿಲ್ಲ... ಒಳ್ಳೆಯ ಚಿಂತನೆ.
April 14, 2008 6:46 PM

Ravikiran Gopalakrishna said...
Suptadeeptiyavare,
Chennagide. deva - obba purusha annuva kaaranakke avanannu kalpaneyalli swalpa viroopavaagisirabahudu. chaturbujhanirabahudu, chaturmukhanirabahudu, ardhanaariswaranirabahudu atava kamalanaabhiyavanirabahudu. aadare namma kelavu deviyarigoo naavu namma kalpaneyalli ide roopavannu kottidevallave..?! Anyways.... olleya chintane..!
April 15, 2008 1:44 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ರವಿಕಿರಣ್. ದೇವಿಯರ ರೂಪ-ಕಲ್ಪನೆಯ ಬಗ್ಗೆ ನನಗಿರುವ ಅಸಂತೋಷವನ್ನು ಇಲ್ಲಿ ಬರೆಯಲಾರೆ... ಅಷ್ಟೂ ಇದೆ.
April 15, 2008 9:04 AM

ಸುಪ್ತದೀಪ್ತಿ suptadeepti said...
ಓದುಗರೇ,
ನಿರ್ಗುಣ, ನಿರಾಕಾರ, ಸಾರ್ವಕಾಲಿಕ, ಸರ್ವಶಕ್ತಿಸ್ವರೂಪ- ಎಂದೆಲ್ಲ ವರ್ಣಿಸಲ್ಪಡುವ, "ದೇವರು" ಎಂದು ಸುಲಭದಲ್ಲಿ ಕರೆಯಲಾಗುವ, ನಮ್ಮೆಲ್ಲರ ಇರುವಿಕೆಯ ಆಧಾರವಾಗಿರುವ, ಅನಂತ-ಅಗಾಧವಾಗಿರುವ- "ಮೂಲ ಶಕ್ತಿ"ಯನ್ನು ನಮ್ಮ ನಮ್ಮ ಕಲ್ಪನೆಯಲ್ಲಿ ಏನೇನೋ ಆಗಿಸಿಕೊಂಡಿದ್ದೇವಲ್ಲ... ಅದರ ಬಗ್ಗೆ ಸಣ್ಣ ಚಟಾಕಿಯಷ್ಟೇ ಇದು. "ದೇವರ" ಬಗ್ಗೆ ನನಗ್ಯಾವ ಅಸಮಾಧಾನವೂ ಇಲ್ಲ. ಆ ಪರಮಾತ್ಮನ ಆರಾಧಕಿಯೇ ನಾನು.
April 15, 2008 9:06 AM


ಅಕ್ಟೋಬರಿನ 4 ಪತ್ರೋತ್ತರ:
ಮನಸ್ವಿನಿ said...
ಒಂದೇ ತಲೆಯ ನೋವಿಗೇ
ಬೆಂಡಾಗುವ ನನಗೆ
ಚತುರ್ಮುಖನ ಪರಿಸ್ಥಿತಿ
ನೆನೆದೇ ಹಾರುತ್ತದೆ ಗುಂಡಿಗೆ.:)
October 2, 2007 7:14 AM

suptadeepti said...
ಧನ್ಯವಾದಗಳು ಮನಸ್ವಿನಿ.
October 2, 2007 3:16 PM

ಸಿಂಧು Sindhu said...
ಜ್ಯೋತಿ,
ಚೆನ್ನಾಗಿದೆ ಕವಿತೆ. ಮೂರ್ತಿರಾಯರ ದೇವರು ನೆನಪಾಯಿತು.
ಇಷ್ಟವಾದ ಸಾಲು
...ನೀರಾಗಿಸಿ ಹರಿಸಿ ಬಿಡುವುದೇ... ಅವನ ಜುಟ್ಟನ್ನೇ, ಹೆಬ್ಬೆಟ್ಟನ್ನೇ? ಒಡೆಯುವುದೆ ಹೊಟ್ಟೆಯನ್ನೇ...

ಅಲ್ವೇ..ಸರಿಯಾಗಿ ಹೇಳಿದ್ರಿ.
October 5, 2007 8:06 AM

suptadeepti said...
ಧನ್ಯವಾದಗಳು ಸಿಂಧು. "ನಿರ್ಗುಣ, ನಿರಾಕಾರ, ಶಕ್ತಿ ಸ್ವರೂಪ" ದೇವರನ್ನು ನಾವು ಏನೇನೆಲ್ಲ ಮಾಡಿ ಕೂರಿಸುತ್ತೇವೆ ಅನ್ನುವ ಬಗ್ಗೆ ನನ್ನ ಅಭಿಪ್ರಾಯದ ತುಣುಕು ಇದು. ನಮ್ಮ ಮನಸ್ಸಿನ ಪ್ರಕೃತಿ-ವಿಕೃತಿಗಳಿಗೆ ಸರಿಯಾಗಿ ದೇವರಿಗೆ ರೂಪ ಕೊಡುವ ನಮಗೆ, ಮಾನವ ಮನಸ್ಸಿನ ಗತಿ-ಸ್ಥಿತಿಗಳು ಅರ್ಥವಾಗುವುದು ಯಾವಾಗ? ಇರಲಿ ಬಿಡಿ, ಇವೂ ಒಳ್ಳೆಯ ಮನೋರಂಜಕಗಳು; ಅಲ್ಲವೆ?
May 12, 2008 10:59 AM

ನನ್ನ ಸತ್ಯ

Sunday, March 23, 2008

ಕಂಡ ಕಂಡೆಡೆಯೆಲ್ಲ
ಕೈ ಮುಗಿದು ಫಲವೇನು
ಕಲ್ಲು ಗುಡಿಯೊಳಗೆಲ್ಲು ದೈವವಿಲ್ಲ
ಮೂರ್ತತೆಯ ನೆಪದಲ್ಲಿ
ಅಮೂರ್ತವಾಗಿಹುದು
ಒಳಗಣ್ಣಿಗಲ್ಲದೆ ನಿಲುಕದಲ್ಲ

ಪೂಜಿಸಲು ಅರ್ಚಿಸಲು
ಹಾಲು ಹಣ್ಣಿನ ಸೇವೆ
ಬೀದಿ ಬಡವನಿಗಿಷ್ಟು ಕೊಟ್ಟರೇನು?
ಹರಿದು ಮಣ್ಣನು ಸೇರ್ವ
ಎಳನೀರನೊಂದು ದಿನ
ಒಬ್ಬ ರೋಗಿಯ ಕೈಯೊಳಿಟ್ಟರೇನು?

ಕಡೆಗೊಂದು ದಿನ ನಾವು
ಎಲ್ಲ ನಡೆಯುವ ಹಾದಿ
ಇಂದು ಕಾಣದೆ, ಕುರುಡನಾನೆಯಂತೆ
ತಾನು ಕಂಡುದೆ ಸತ್ಯ
ಉಳಿದೆಲ್ಲ ಮಿಥ್ಯವೆನೆ
ಜಗವನ್ನು ಮಿಥ್ಯೆಯೇ ಆಳ್ವುದಂತೆ

ರಂಗಮಂಚದ ಮೇಲೆ
ರಂಗು ರಂಗಿನ ದೀಪ
ನಟನೆಯದು ನೈಜದಲಿ ತೋರುತಿಹುದು
ಕಣ್ಣು ಕಂಡದ್ದಷ್ಟೆ
ನಮ್ಮ ನೋಟದ ಅರ್ಥ
ಸೂತ್ರಧಾರನ ಪಾತ್ರ ತೋರದಿಹುದು
(೨೫-ಮಾರ್ಚ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 1:30 PM
Labels: , ,

16 ಪತ್ರೋತ್ತರ:
Shubhada ಶುಭದಾ said...
ಅಕ್ಕಾ,
ಕವನ ತುಂಬ ಮಾರ್ಮಿಕವಾಗಿದೆ. ತುಂಬ ಇಷ್ಟವಾಯಿತು. ಧನ್ಯವಾದ ನಿಮಗೆ.
March 23, 2008 9:14 PM

ಬ್ರಹ್ಮಾನಂದ ಎನ್.ಹಡಗಲಿ said...
'ರಂಗಮಂಚದ ಮೇಲೆ ರಂಗು ರಂಗಿನ ದೀಪ'
ಈ ಸಾಲುಗಳನ್ನು ನೀವು ಪರಿಸರಕ್ಕೆ ಹೋಲಿಸಿದಂತೆ ಭಾಸವಾಗುತ್ತದೆ. ಕವನ ಮನಮುಟ್ಟುವಂತಿದೆ.
March 24, 2008 12:12 PM

ಸುಪ್ತದೀಪ್ತಿ suptadeepti said...
ಶುಭದಾ, ಧನ್ಯವಾದ ಕಣೇ.

ಬ್ರಹ್ಮಾನಂದ,ನಿಮಗೆ- ಸ್ವಾಗತ, ಧನ್ಯವಾದ, ಎರಡೂ. ನೀವು ಹೇಳಿದ ಎರಡು ಸಾಲುಗಳು ನಮ್ಮ ದೈನಂದಿನ ಪರಿಸರಕ್ಕೆ, ಈ ಭೌತಿಕ ಲೋಕಕ್ಕೆ. ಸರಿಯಾಗಿಯೇ ಹಿಡಿದಿದ್ದೀರಿ.
March 24, 2008 5:00 PM

ಶಾಂತಲಾ ಭಂಡಿ said...
suptadeeptiಅವರೆ...
ಎಲ್ಲವೂ ಸೊಗಸಾದ ಅರ್ಥದ ಸಾಲುಗಳೇ.
ಮೊದಲಿನೆರಡು stanzas ತುಂಬ ಇಷ್ಟವಾದವು.
March 24, 2008 5:59 PM

sunaath said...
"ಕಣ್ಣು ಕಂಡದ್ದಷ್ಟೆನಮ್ಮ ನೋಟದ ಅರ್ಥ
ಸೂತ್ರಧಾರನ ಪಾತ್ರ ತೋರದಿಹುದು"
Very Good, ಜ್ಯೋತಿ! ಬೇಂದ್ರೆಯವರ "ಹೃದಯಸಮುದ್ರ"ದ ಸಾಲೊಂದು ನೆನೆಪಾಯಿತು:
"ಕಂಡವರಿಗಲ್ಲೊ ಕಂಡವರಿಗಷ್ಟೆ ಕಂಡsದ ಇದರ ನೆಲೆಯು"
March 25, 2008 2:02 AM

ಸುಪ್ತದೀಪ್ತಿ suptadeepti said...
ಧನ್ಯವಾದ ಶಾಂತಲಾ.

ಧನ್ಯವಾದ ಕಾಕಾ.
--ಬೇಂದ್ರೆಯವರ "ಹೃದಯಸಮುದ್ರ"ದ ಸಾಲೊಂದು ನೆನಪಾಯಿತು:"ಕಂಡವರಿಗಲ್ಲೊ ಕಂಡವರಿಗಷ್ಟೆ ಕಂಡsದ ಇದರ ನೆಲೆಯು"
--ಬೇಂದ್ರೆಯವರ ಈ ಕವನದ ಬಗ್ಗೆ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
March 25, 2008 8:46 PM

ಸುಶ್ರುತ ದೊಡ್ಡೇರಿ said...
ಇವತ್ತು ಬೆಳಗ್ಗೆ ಓದಿದ ಎರಡು ಒಳ್ಳೆಯ ಕವಿತೆಗಳಲ್ಲಿ ಇದೂ ಒಂದು. ಇನ್ನೊಂದು, ಇಲ್ಲಿದೆ.
March 26, 2008 9:24 PM

ಸುಶ್ರುತ ದೊಡ್ಡೇರಿ said...
ಅಂದಹಾಗೇ, ನಿಮ್ಮ ಬ್ಲಾಗಿನ ಹೊಸ ಲೇಔಟು ಚೆನ್ನಾಗಿದೆ.
March 26, 2008 9:24 PM

ಸುಪ್ತದೀಪ್ತಿ suptadeepti said...
ಧನ್ಯವಾದ ಸುಶ್, ನಿನ್ನ ಎರಡೂ ಪ್ರತಿಕ್ರಿಯೆಗಳಿಗೆ. ಹೊಸದೇನನ್ನೋ ಮಾಡುತ್ತಲೇ ಇರುವ ಕೆಟ್ಟ ಚಟ ನನಗೆ, ಏನ್ಮಾಡಲಿ?
March 26, 2008 10:03 PM

ಬಾನಾಡಿ said...
ಅಪರೂಪಕ್ಕೆ ದೊರೆತ ಕಾವ್ಯಾನುಭೂತಿಯಿಂದ ಕೂಡಿದ ಅಪೂರ್ವವಾದ ಕವನ. ಕವನದ ಆಶಯ ಅನನ್ಯವಾದುದು.
ಒಲವಿನಿಂದ
ಬಾನಾಡಿ
March 28, 2008 6:03 PM

ಸುಪ್ತದೀಪ್ತಿ suptadeepti said...
ಸ್ವಾಗತದ ಜೊತೆಗೆ ಧನ್ಯವಾದಗಳು, ಬಾನಾಡಿ. ಹೀಗೇ ಬರುತ್ತಿರಿ, ಬರೆಯುತ್ತಿರಿ.
March 29, 2008 10:19 PM

Ravikiran Gopalakrishna said...
Suptadeeptiyavare, sundaravaada saalugalu. Modaleradu stanza Odi innondu kavite nenapige bantu. "haavige haaleradarenu phala... bevu belladalidalenu phala...".
April 3, 2008 10:36 PM

ಸುಪ್ತದೀಪ್ತಿ suptadeepti said...
ಸ್ವಾಗತ ರವಿಕಿರಣ್. ವಚನದ ಸಾಲುಗಳ ಆಳ, ಗಾಂಭೀರ್ಯ, ಅರ್ಥಸಾಂದ್ರತೆ, ನನ್ನ ಗುರಿ ಮಾತ್ರ. ಪ್ರತಿಕ್ರಿಯೆಗೆ ಧನ್ಯವಾದಗಳು.
April 3, 2008 11:18 PM

ಹಂಸಾನಂದಿ Hamsanandi said...
ಸುಪ್ತದೀಪ್ತಿ,
ಕವನ ಬಹಳ ಚೆನ್ನಾಗಿದೆ; ಎರಡನೆ, ಮತ್ತು ನಾಲ್ಕನೆ ಚರಣಗಳು ಬಹಳ ಹಿಡಿಸಿದವು.
ಜೊತೆಗೆ, ’ಹರಿಗೆ ಎದೆಯೊಳೊಂದು ಗುಡಿಯ ಕಟ್ಟುತಿರುವೆನು’ ಸಾಲೂ ನೆನಪಾಯಿತು.
April 10, 2008 5:17 PM

ಸುಪ್ತದೀಪ್ತಿ suptadeepti said...
ಹಂಸಾನಂದಿ, ಧನ್ಯವಾದಗಳು. ಹಿರಿಯ ಕವಿಗಳ ಸಾಲುಗಳನ್ನು ನನ್ನ ಕವಿತೆ ನೆನಪಿಸಿದರೆ ಅದು ನಿಮ್ಮ ಓದಿನ ಆಳವನ್ನು, ಹರಹನ್ನು ತೋರಿಸುತ್ತದೆ ಎಂದು ನಮ್ರವಾಗಿ ತಿಳಿಯುತ್ತೇನೆ.
April 10, 2008 6:13 PM

ಶರಣು ನಿನಗೆ

Sunday, March 16, 2008

(ಶ್ರೀ ಗುರುರಾಜ ಮಾರ್ಪಳ್ಳಿಯವರ ಸಂಗೀತ ನಿರ್ದೇಶನದಲ್ಲಿ "ಹೇಳು ಮನಸೇ"- ದ್ವನಿಮುದ್ರಿಕೆಯ ಮೊದಲ ಹಾಡು.
ಹಾಡಿದವರು- ರಾಘವೇಂದ್ರ ಆಚಾರ್, ಮಣಿಪಾಲ.)


ಚೈತ್ರ ಕೊನರುವ ಮುನ್ನ, ಹೂವು ಅರಳುವ ಮುನ್ನ,
ಮುಗುಳು ಅರಳುಗಳೆಲ್ಲ ಬೆಳೆವ ಮುನ್ನ...
ಚಿಗುರು ಹಸುರುವ ಮುನ್ನ, ಹೀಚು ಮಾಗುವ ಮುನ್ನ,
ಗಾಳಿ ತಂಬೆಲರಾಗಿ ಸುಳಿವ ಮುನ್ನ...

ಸುಡುಬೇಗೆ ಧಗೆ ತಂದೆ, ಮೊಗ್ಗ ಬಾಡಿಸಲೆಂದೆ?
ನವಿರು ಪಲುಕಿನ ಮೇಲೆ ಹಗೆಯೆ, ತಂದೆ?

ಗಂಧ ಹರಡುವ ಮುನ್ನ, ಮಾಗಿ ಮರಳುವ ಮುನ್ನ,
ಕನಸು ಕುಸುಮಿತಗೊಂಡು ನಗುವ ಮುನ್ನ...
ಒಸಗೆ ಉಸುರುವ ಮುನ್ನ, ಬೆಸುಗೆ ಹೊಸೆಯುವ ಮುನ್ನ,
ಮನದ ಮರಿ ಗರಿ ಬಿಚ್ಚಿ ಹಾರೋ ಮುನ್ನ...

ಕೊರಡ ಕಮರಿದೆಯೇಕೆ? ಬಿಂಬ ಛೇದಿಸಿತೇಕೆ?
ನಂಟನಂಟದ ರೀತಿ ಏಟಿದೇಕೆ?

ನಿನ್ನ ಮಮತೆಯ ಬಲ್ಲೆ, ನಿನ್ನ ರೌದ್ರವನೊಲ್ಲೆ,
ಧರಣೀಶ, ಕರುಣೆಯಲಿ ನೋಡು ಇಲ್ಲೆ...
ತಳಿರು ನಳನಳಿಸಿದರೆ, ಕರುಳಕುಡಿಯಾಡಿದರೆ,
ಮರೆಯುವೆನೆ ನಿನ್ನಿರವ; ಹರಸೈ ದೊರೆ!

ಚೇತನಾಚೇತನದೆ ಚೈತನ್ಯರೂಪಿಂದೆ
ಜೀವಕೋಟಿಯ ಜೀವ ನೀನೆ, ತಂದೆ...
ಆಸರೆಗೆ, ಆಸರಿಗೆ, ನೋವು-ನಲಿವುಗಳ ಬಗೆ
ಈವ ದೇವನೆ ಕಾಯೊ; ಶರಣು ನಿನಗೆ.
(೦೨-ಆಗಸ್ಟ್-೨೦೦೧)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:51 PM
Labels:

14 ಪತ್ರೋತ್ತರ:
Avinash Siddeshware said...
ಸುಪ್ತದೀಪ್ತಿ,
ಭಕ್ತಿಗೀತೆ ತುಂಬಾ ಚೆನ್ನಾಗಿದೆ.
March 16, 2008 8:58 PM

ಸುಪ್ತದೀಪ್ತಿ suptadeepti said...
ಧನ್ಯವಾದ ಅವಿನಾಶ್.
March 16, 2008 9:02 PM

parijata said...
ಪದ್ಯ ಬಹಳ ಹಿಡಿಸಿತು. ಅಂದ ಹಾಗೆ, ನಿಮ್ಮನ್ನು tag ಮಾಡಿದ್ದೇನೆ. ಸಮಯ ಸಿಕ್ಕಿದಾಗ ಬರೆಯಿರಿ.
March 17, 2008 3:14 AM

ಶ್ಯಾಮಾ said...
ತುಂಬ ಒಳ್ಳೆಯ ಅರ್ಥಗರ್ಭಿತ ಸಾಲುಗಳು. ಹಾಗೆಯೇ ಕಣ್ಣುಮುಚ್ಚಿ ಕುಳಿತು ಹಾಡುವ ಮನಸ್ಸಾಯಿತು ಇದನ್ನು ಓದಿ. (ನನ್ನದೇ ರಾಗದಲ್ಲಿ :)).ಇಷ್ಟೊಳ್ಳೆ ಸಾಲುಗಳನ್ನು ನೀಡಿದ್ದಕ್ಕೆ ಧನ್ಯವಾದಗಳು ನಿಮಗೆ.
March 17, 2008 5:24 AM

ಸುಪ್ತದೀಪ್ತಿ suptadeepti said...
ಪಾರಿಜಾತ, ಶ್ಯಾಮಾ, ಧನ್ಯವಾದಗಳು.
March 17, 2008 10:18 AM

ಶಾಂತಲಾ ಭಂಡಿ said...
suptadeepti ಅವರೆ...
ತುಂಬ ಸುಂದರವಾಗಿ ರಚಿಸಿದ್ದೀರ. "ಶರಣು ನಿಮಗೆ"
March 17, 2008 1:58 PM

ಸುಪ್ತದೀಪ್ತಿ suptadeepti said...
ಧನ್ಯವಾದ ಶಾಂತಲಾ.
March 17, 2008 2:42 PM

sunaath said...
ಜ್ಯೋತಿ, ನಿನ್ನ ಭಕ್ತಿಮುಖದ ಪರಿಚಯವಾಯಿತಮ್ಮ, ತುಂಬಾ ಸಂತೋಷವಾಯಿತು.
-ಸುನಾಥ ಕಾಕಾ
March 18, 2008 9:58 AM

ಪಯಣಿಗ said...
ಹಲೋ,
ಇದರ ಆಡಿಯೋ ಫೀಡ್ ಮಾಡಲು ಸಾಧ್ಯವೇ?'..ನ೦ಟನ೦ಟದ ರೀತಿ ಏಟಿದೇಕೆ?' ಮನಸ್ಸಿನಾಳಕ್ಕೆ ಇಳಿದ ಸಾಲುಗಳು!
March 18, 2008 12:06 PM

ಸುಪ್ತದೀಪ್ತಿ suptadeepti said...
ಸುನಾಥ್ ಕಾಕಾ, ನಿಮ್ಮ ಸಂತೋಷಕ್ಕೆ ಧನ್ಯತೆಯ ನಮನಗಳು.
ಪಯಣಿಗ, ಅದನ್ನು ಪ್ರಯತ್ನಿಸಿದೆ, ಯಾಕೋ ಆಗಲಿಲ್ಲ; ಕೈಬಿಟ್ಟೆ. ಧನ್ಯವಾದಗಳು.
March 18, 2008 4:00 PM

Keshav Kulkarni said...
ಸುಪ್ತದೀಪ್ತಿ,
www.esnips.com ಪ್ರಯತ್ನಿಸಿ. ತುಂಬ ಸರಳ ಜಾಲ. ನೊಂದಾಯಿಸಿ, ನಿಮ್ಮ ಆಡಿಯೋ ಅಪ್-ಲೋಡ್ ಮಾಡಿ, ನಾವೂ ಕೇಳಿ ಖುಷಿ ಪಡುತ್ತೇವೆ.
ಕೇಶವ
March 19, 2008 1:00 AM
Anonymous said...
ಜ್ಯೋತಿ, ಕವನ ಬಹಳ ಸೊಗಸಾಗಿದೆ. ಆದಷ್ಟು ಬೇಗ ಹಾಡು ಕೇಳಿಸಿ.
-ಪೂರ್ಣಿಮ
March 19, 2008 9:19 AM

ಸುಪ್ತದೀಪ್ತಿ suptadeepti said...
ಕೇಶವ್, ಧನ್ಯವಾದಗಳು.
eSnips ಪ್ರಯತ್ನಿಸಿದೆ, ಯಾಕೋ ಸರಿಯಾಗಲಿಲ್ಲ. ಅಪ್-ಲೋಡ್ ಮಾಡ್ಲಿಕ್ಕೆ ಆಗ್ಲಿಲ್ಲ.
ಈಗ ಪಾಡ್-ಕಾಸ್ಟ್ ಮೂಲಕ ಹಾಡುಗಳನ್ನು ಅಪ್-ಲೋಡ್ ಮಾಡಿದ್ದೇನೆ. ಕೇಳಬಹುದು.
ಪೂರ್ಣಿಮ, ಧನ್ಯವಾದಗಳು.
March 19, 2008 11:44 AM

ಸುಪ್ತದೀಪ್ತಿ suptadeepti said...
"ಹೇಳು ಮನಸೇ" ಧ್ವನಿ ಮುದ್ರಿಕೆಯ ಉಳಿದ ಹಾಡುಗಳನ್ನೂ ಒಂದೊಂದಾಗಿ podcastಗೆ up-load ಮಾಡಲಿದ್ದೇನೆ.
ಅದರ ಲಿಂಕ್ ಮುಖ್ಯ ಪುಟದಲ್ಲಿ ಬದಿಗೆ ಮೇಲೇನೇ ಇದೆ. ನೋಡಿ, ಹಾಡು ಕೇಳಿ.
March 19, 2008 11:48 AM

ಅರಿವಿನಾಚೆಯ ಲೋಕ

Wednesday, March 12, 2008

ಮದುವೆಯಾದ ಹೊಸತು, ನಾವಿನ್ನೂ ಮದುಮಕ್ಕಳೇ. ಹೊಸತೊಂದು ಮನೆಗೆ ಬಾಡಿಗೆಗೆ ಬಂದಿದ್ದೇವೆ. ದೊಡ್ಡದಾದ, ತುಂಬಾ ದೊಡ್ಡದಾದ ಮನೆಯ ಮುಂದಿನ ಎರಡು ಕೋಣೆಯ ಭಾಗ ನಮ್ಮ ವಾಸಕ್ಕೆ. ನೆಂಟರು ಜಾಸ್ತಿ ಬರುವವರು ಇಲ್ಲವೆಂದು, ದೊಡ್ಡ ಮನೆಯ ಹಿಂಭಾಗದಲ್ಲಿರುವ ಬಚ್ಚಲು ಮನೆಯನ್ನೇ ನಮಗೆ ಬಿಟ್ಟಿದ್ದಾರೆ. ಬಚ್ಚಲು ದಾಟಿದರೆ ದೊಡ್ಡ ಹಿತ್ತಲು. ನಮ್ಮ ಭಾಗಕ್ಕಿರುವ ಮನೆಯಲ್ಲಿ ಒಂದು ಕೋಣೆಯನ್ನು ಪಡಸಾಲೆ, ಅಡುಗೆ ಕೋಣೆ ಅಂತ ವಿಭಾಗಿಸಿಕೊಂಡಿದ್ದೇವೆ. ಒಳಗಿನ ಪುಟ್ಟ ಕೋಣೆ ನಮ್ಮದು. ರಾತ್ರೆ ಹೊತ್ತು ಬಚ್ಚಲಿಗೆ ಹೋಗಬೇಕಾದರೆ ಈ...ಷ್ಟುದ್ದದ ಹಜಾರ ದಾಟಿಕೊಂಡು, ಮಾಳಿಗೆಗೆ ಹೋಗುವ ಮೆಟ್ಟಲಿನ ಅಡಿಯಲ್ಲಿ ಹೋಗಬೇಕು, ಅದೊಂದೇ ಬೇಸರ ತರಿಸುವ ವಿಷಯ. ಮಿಕ್ಕೆಲ್ಲವೂ ತೊಂದರೆಯಿಲ್ಲ ಅನಿಸಿತ್ತು.

ನಮ್ಮ ಭಾಗದಿಂದ ಬಚ್ಚಲಿಗೆ ಹೋಗುವ ಹಜಾರದಲ್ಲಿ ಎಡ-ಬಲಕ್ಕೆ ಕಿಟಕಿಗಳು. ಬಲಬದಿಯ ಕಿಟಕಿಯಿಂದ ಮನೆಯ ನಡುವಿನ ಅಂಗಳ, ಹಳೇ ತುಳಸಿಕಟ್ಟೆ ಕಂಡರೆ, ಎಡ ಬದಿಯಿಂದ ತೆಂಗಿನ ತೋಟ ಕಾಣುತ್ತದೆ. ಬಲೆ-ಧೂಳು ಮುಸುಕಿದ ಈ ಹಜಾರ ಸ್ವಚ್ಛಗೊಳಿಸಿ ಇಲ್ಲೇ ಒಂದು ಕುರ್ಚಿ ಹಾಕಿಕೊಂಡು ಕೂತರೆ... ಗಾಳಿ-ಬೆಳಕುಗಳಿಗೂ ನೆಮ್ಮದಿಗೂ ಯಾವುದೇ ತೊಂದರೆಯಿರಲಿಲ್ಲ. ನನ್ನ ಹುರುಪು ಹೆಚ್ಚಿತು. ನಡು ಪೇಟೆಯಲ್ಲೂ ಇಂಥ ಶಾಂತ ಮನೆ ಸಿಕ್ಕಿದ್ದು ಸಂತೋಷ ತಂದಿತ್ತು. ಮನೆಯ ಯಜಮಾನರಿಗೆ ಹೇಳಿ ಅಪ್ಪಣೆ ಪಡೆದಾಯ್ತು. ಎಲ್ಲವನ್ನೂ ಸ್ವಚ್ಛಗೊಳಿಸಿ, ಮಧ್ಯಾಹ್ನದ ಜೋಂಪುನಿದ್ದೆ ಅಲ್ಲೇ ಮಾಡುವ ಕನಸು ಶುರುವಾಯ್ತು.

ಅದೇ ರಾತ್ರೆ, ಊಟ ಮುಗಿಸಿ ಬಚ್ಚಲಿಗೆ ಹೋಗಿ ಬಂದು, ಇನ್ನು ರಾತ್ರೆ ಹೋಗೋದು ಬೇಡ ಅಂತ ನಿರ್ಧರಿಸಿ ಮಲಗಿದ್ದೆವು. ಆದರೆ ದೇಹ ಕೇಳಬೇಕಲ್ಲ... ಸುಮಾರು ಎರಡು ಘಂಟೆಗೆ ಜಲಬಾಧೆ ಎಬ್ಬಿಸಿತು. ಸರಿ, ಇವರನ್ನೂ ಕರೆದು ಎಬ್ಬಿಸಿದೆ. ಹೊಸ ಜಾಗ, ಒಬ್ಬಳೇ ಆಚೆ ಹೋಗಲು ಏನೋ ಅಳುಕು. ಕಣ್ಣುಜ್ಜುತ್ತಾ ಎದ್ದರು. ನನ್ನ ಜೊತೆ ಟಾರ್ಚ್ ಹಿಡಿದು ಆಚಿನ ಹಜಾರಕ್ಕೆ ಬಂದರು. ಅಲ್ಲಿ... ಆಶ್ಚರ್ಯ.... ಅಲ್ಲಿ....

....ಹಗಲಿನಂತೆ ಬೆಳಕು. ಎಲ್ಲವೂ ತೊಳೆದಿಟ್ಟಂತೆ ಹೊಳೆಯುತ್ತಿದ್ದವು. ಮಾಳಿಗೆಯ ಮೆಟ್ಟಲಿನ ಮೇಲೆ ಸರ-ಬರ ಸೀರೆಗಳ, ಕಿಣಿ-ಕಿಣಿ ಬಳೆಗಳ ಸದ್ದು. ಆ ಕಡೆಯ ತುಳಸಿಕಟ್ಟೆಯಲ್ಲಿ ನಳನಳಿಸುವ ತುಳಸಿಗಿಡ. ಅದಕ್ಕೆ ವಂದಿಸುತ್ತಿರುವ ಒಬ್ಬ ಮುತ್ತೈದೆ...! ಸುಮಾರಾದ ಜರಿ-ಸೀರೆ ಉಟ್ಟು, ಹಣೆಗೆ ಅಷ್ಟು ದೊಡ್ಡ ಕುಂಕುಮ ಇಟ್ಟು, ದೊಡ್ಡ ತುರುಬಿನ ತುಂಬ ಮಲ್ಲಿಗೆ ಕನಕಾಂಬರ ಮುಡಿದ ನಡುವಯಸ್ಸಿನ ಲಕ್ಷಣವಾದ ಮುತ್ತೈದೆ. ಕಂಡರೆ ಕೈಮುಗಿಯಬೇಕೆನ್ನಿಸಿತು. ತುಳಸಿಗೆ ಸುತ್ತು ಬಂದು ಆಕೆ ಒಳಗೆ ಬಂದರು. ಅಲ್ಲೇ ಇನ್ನೊಂದು ಬದಿಗೆ ದೊಡ್ಡ ಅಡುಗೆಮನೆ. ಆಕೆ ಅತ್ತ ಹೊರಟವರು ನಮ್ಮನ್ನು ಕಂಡು, ಇತ್ತ ಬಂದರು. ನಯವಾಗಿ ನಡುವನ್ನು ಒಂದಿಷ್ಟೇ ಇಷ್ಟು ಬಾಗಿಸಿ, ಕೈ ಜೋಡಿಸಿ ವಂದಿಸಿ, `ನಮಸ್ಕಾರ' ಅಂದರು. ನಮಗೆ ಗಲಿಬಿಲಿ, ಗಾಬರಿ, ಗೊಂದಲ. ನಾನು ಮೆತ್ತಗೆ ಇವರನ್ನು ಚಿವುಟಿದೆ, `ಹೇಯ್' ಅಂತ ಕಿರುಚಿದರು. ಇಬ್ಬರಿಗೂ ಎಚ್ಚರ ಇದೆ, ಇದು ಕನಸಲ್ಲ ಅಂತ ಖಾತ್ರಿಯಾಯ್ತು. ಹಾಗಾದ್ರೆ, ಇದೆಲ್ಲ ಏನು? ಇವರೆಲ್ಲ ಯಾರು? ಪ್ರತಿವಂದನೆ ಹೇಳುವಷ್ಟರಲ್ಲಿ, ಈ ಕಡೆಯ ಬಚ್ಚಲಿಂದ `ಅಕ್ಕಾ...' ಅನ್ನುತ್ತಾ ಬಂದರು ಇನ್ನೊಬ್ಬಾಕೆ, ಇವರ ಅವಳಿ ಮುತ್ತೈದೆ... ಸೀರೆಯ ಬಣ್ಣ ಬೇರೆ ಅನ್ನುವುದನ್ನು ಬಿಟ್ಟರೆ ಇಬ್ಬರಲ್ಲೂ ವ್ಯತ್ಯಾಸವೇ ಇಲ್ಲ.

ಅಕ್ಕ ತಂಗಿ ನಮ್ಮ ಕಡೆ ಬರುತ್ತಿದ್ದರೆ ನಾವು ಏನೂ ಅರಿಯದ ಮೂಢರಂತೆ ನಿಂತಿದ್ದೆವು. ಅಷ್ಟರಲ್ಲಿ ಮಾಳಿಗೆಯಿಂದ ಒಂದು ಹುಡುಗಿ, ಲಂಗ ದಾವಣಿಯ ಸುಂದರಿ, ನಾಜೂಕು ಗೊಂಬೆಯಂಥ ಚೆಲುವೆ, ಇಳಿದು ಬಂದಳು. `ಇವರು ಯಾರಮ್ಮಾ? ಚಿಕ್ಕೀ, ಯಾರಿವರು?' ಅಂದಳು. ಅವಳ ಗಂಧರ್ವ ಸೌಂದರ್ಯ ನನ್ನ ಗಮನ ಸೆಳೆದಿತ್ತು. `ನಮ್ಮ ಮಗಳು ಹೀಗೇ ಇರಲಿ' ಅಂತ ಹಾರೈಸಿತ್ತು ಮನಸ್ಸು. ಮೂರೂ ಹೆಂಗಸರ ಕಿಲ-ಕಿಲ ನಗು ಸಂಗೀತದಂತೆಯೇ ಇತ್ತು. ಅವರೆಲ್ಲರ ಅಲಂಕಾರ, ಅಲಂಕಾರ ಪದಕ್ಕೇ ಪ್ರತಿಮೆಯಂತಿತ್ತು. ಹಣೆಯ ತಿಲಕ, ಬೆಳಗಿನ ಬಾಲಭಾನುವಿನಂತೆ ಎಂದರೆ ಕಾವ್ಯವಲ್ಲ. ಧರಿಸಿದ್ದ ಆಭರಣಗಳು ಇವರ ಒನಪು ವೈಯ್ಯಾರಗಳಿಂದಲೇ ತಮ್ಮ ಅಂದ ಹೆಚ್ಚಿಸಿಕೊಂಡಂತೆ ಇದ್ದವು. ಕಿವಿ, ಕತ್ತು, ಸೊಂಟ, ತೋಳು, ಕೈ, ಕಾಲುಗಳಲ್ಲಿ ಬೆಳ್ಳಿ-ಬಂಗಾರಿಯರು ಮಿನುಗುತ್ತಿದ್ದರು. ಇವರೆಲ್ಲ ಗಂಧರ್ವರೇ ಅನ್ನುವ ಭ್ರಮೆಯಲ್ಲಿದ್ದೆ. ಸ್ವರ್ಗದ ಆಹ್ಲಾದದಂತೆ ತೋಟದಿಂದ ತೆವಳಿಕೊಂಡು ಬಂದ ಗಾಳಿಗೆ ಮಲ್ಲಿಗೆ, ಸಂಪಿಗೆಗಳ ಮಿಶ್ರ ಸುಗಂಧವಿತ್ತು. ನಾನು ಕಳೆದೇ ಹೋಗಿದ್ದೆ. ಅಷ್ಟರಲ್ಲಿ, ನನ್ನ ಜಲಬಾಧೆ ಮತ್ತೆ ಎಚ್ಚರಿಸಿತು. ಇವರನ್ನು ಎಳೆದುಕೊಂಡೇ ಬಚ್ಚಲಿನ ಕಡೆ ತಿರುಗಿದೆ. ಅಲ್ಲಿ....

...ಇಡೀ ಕೋಣೆಯೇ ಬೆಂಕಿ ಗೂಡಿನಂತೆ ಇದ್ದ ಬಚ್ಚಲೊಲೆ. ಒಲೆಯ ಬಾಯಿ, ಬಾಗಿಲಿನಷ್ಟು ದೊಡ್ಡದು. ಅದರ ಒಂದು ಗೋಡೆಯ ಆ ಕಡೆಗೆ ಬಚ್ಚಲುಮನೆ. ಯಾರೋ ಒಬ್ಬರು ತುಂಡುಸೀರೆಯುಟ್ಟ, ತುಂಬಾ ಬೆಳ್ಳಗಿದ್ದ ಮಡಿ-ಹೆಂಗಸು ಒಲೆಗೆ ಇಡೀ ತೆಂಗಿನ ಸೋಗೆ, ಆ...ಷ್ಟುದ್ದದ ಕಟ್ಟಿಗೆ ತುಂಬುತ್ತಿದ್ದರು. ಅವರ ದೈತ್ಯ ಶಕ್ತಿಗೆ ಬೆರಗಾದೆ. ಅವರನ್ನು ಕೇಳಿದೆ, `ಇಷ್ಟು ದೊಡ್ಡ ಒಲೆ ಯಾಕೆ? ಇದೊಳ್ಳೆ ಇಟ್ಟಿಗೆಗೂಡಿನ ಒಲೆಗಿಂತ ದೊಡ್ಡದಿದೆಯಲ್ಲ!' ಅಂತ. ಮೊದಲಿಗೆ ನನ್ನನ್ನು ನಿರ್ಲಕ್ಷಿಸಿದ ಆಕೆ, ನಂತರ ತನ್ನ ಕೈ ಮುಂದೆ ಮಾಡುತ್ತಾ... `ಇಫ್ ಯೂ ಹ್ಯಾವ್ ಎನೀ ಕ್ವೆಶ್ಚನ್ಸ್... ಕಾಲ್ ಮೀ ಅಟ್ ದಿಸ್ ನಂಬರ್...' ಅಂದು ಒಂದು ಚೀಟಿಯನ್ನು ನನ್ನ ಕೈಯಲ್ಲಿರಿಸಿದರು. ಅವಳಿ ಮುತ್ತೈದೆಯರಿಬ್ಬರೂ ಆ ಸುಂದರಿ ಹುಡುಗಿಯ ಜೊತೆಗೆ ಹಿಂದೆ-ಹಿಂದೆ ನಡೆಯುತ್ತಾ ಬಂದು ಒಲೆಯೊಳಗೆ ಹೋದಂತೆ, ಆ ಮಡಿ ಹೆಂಗಸೂ ಒಲೆಯೊಳಗೇ ಹೋದಂತೆ, ಅವರನ್ನೆಲ್ಲ ಸೇರಿಸಿಕೊಂಡ ಬೆಂಕಿ ಕೂಡಲೇ ಆರಿ ತಣ್ಣಗಾದಂತೆ ಭಾಸವಾಗಿ, ನನ್ನ ಮೈಯೆಲ್ಲ ನಡುಗಲು ಶುರುವಾಯಿತು.

`ಅಮ್ಮಾ, ಅಮ್ಮಾ... ಎಂತಾ, ಏನಾಯ್ತು? ಕನಸಾ?... ಗಂಟೆ ನಾಲ್ಕಾಯ್ತು. ಏಳಿ. ಸಾಕು ನಿಮ್ಮ ನ್ಯಾಪ್!!' ಹದಿ ಹರೆಯದ ಮಗನ ಸ್ವರ ನನ್ನ ಹೊರ ಪ್ರಜ್ಞೆಯನ್ನು ಸನ್ನಿವೇಲಿನ ಮನೆಯ ವಾಸ್ತವಕ್ಕೆ ತಂದರೂ ನನ್ನ ಒಳಮನಸ್ಸು ವಾಸ್ತವಕ್ಕೆ ಬರಲು ಇಡೀ ಸಂಜೆಯೇ ಬೇಕಾಯ್ತು. ಆದರೂ...

ಆದರೂ... ನಿದ್ದೆಯಿಂದೆದ್ದಾಗ ನನ್ನ ಬಲಗೈ ಹಿಡಿಯೊಳಗೆ ಖಾಲಿ ಕಾಗದದ ತುಂಡೊಂದು ಹೇಗೆ ಬಂತೆಂದು ನನಗಿನ್ನೂ ತಿಳಿದಿಲ್ಲ.
(೨೮-ಜೂನ್-೨೦೦೭)
(2007ರ ಜುಲಾಯಲ್ಲಿ ದಟ್ಸ್-ಕನ್ನಡದಲ್ಲಿ ಪ್ರಕಟಗೊಂಡಿತ್ತು)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:08 PM
Labels: , ,

19 ಪತ್ರೋತ್ತರ:
sunaath said...
ಜ್ಯೋತಿ,
ನೀನು ಬರೆದದ್ದನ್ನು ಓದುವಾಗ ನಾನೂ ಒಂದು ಭ್ರಮಾಲೋಕವನ್ನೇ ಹೊಕ್ಕಂತೆ ಭಾಸವಾಗುತ್ತಿತ್ತು. ಇದಲ್ಲದೆ, ನೀನು ಒಂದು transcendantal sessionನಲ್ಲಿ ೨೦೦೦ ವರ್ಷಗಳಷ್ಟು ಹಿಂದೆ ಪಯಣಿಸಿದ್ದದ್ದು ಬರೆದಿದ್ದೀಯಾ. ಈ parapsychological potential ಅಥವಾ occult faculty ಎಲ್ಲರಿಗೂ ಇರುವದಿಲ್ಲ. ಇದನ್ನು develop ಮಾಡಬಹುದು ಎಂದು ಹೇಳುತ್ತಾರೆ. ನೀನು ಪ್ರಯತ್ನಿಸಬಹುದು.
-ಕಾಕಾ
March 13, 2008 1:16 AM

Avinash Siddeshware said...
ಕಥೆ ತುಂಬ ಚೆನ್ನಾಗಿದೆ ಓದುವಾಗ ಮೈ ಜುಮ್ಮೆನ್ನುತ್ತಿತ್ತು
March 13, 2008 5:07 AM

ತೇಜಸ್ವಿನಿ ಹೆಗಡೆ said...
ಅಕ್ಕ,
ಒಂದು ಕ್ಷಣ ನನಗೆ ನಾನೇ ಆ ಮನೆಯಲ್ಲಿದಂತೆ ಅನುಭವವಾಯಿತು.. ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ್ದೀರಾ.. ತುಂಬಾ ಚೆನ್ನಾಗಿದೆ. ಅಂದಹಾಗೆ ಎಚ್ಚರವಾದಾಗ ನಿಮ್ಮ ಕೈಯೊಳಗಿದ್ದ ಆ ಚೀಟಿಯಲ್ಲಿ ಏನುಬರೆದಿತ್ತು?
ಸುನಾಥರೆ,
parapsychological potential ಅಥವಾ occult faculty ಅಂದರೆ ಏನರ್ಥ? ತುಂಬಾ ಕುತೂಹಲವಾಗಿದೆ ಅದಕ್ಕೇ ಕೇಳಿದ್ದು.
ಅಕ್ಕಾ ನಿಮಗೆ ತಿಳಿದಿದ್ದರೂ ತಿಳಿಸಿ.
March 13, 2008 7:32 AM
sunaath said...
ತೇಜಸ್ವಿನಿ,
ಕೆಲವರಿಗೆ intution ಇದೆ ಎಂದು ಹೇಳುತ್ತೇವೆ. ಇನ್ನೂ ಕೆಲವರು ಮನೋಬಲದಿಂದಲೆ ವಸ್ತುಗಳನ್ನು ಚಲಿಸಬಲ್ಲರು. ಭಾರತದಲ್ಲಿ, ಇಂತಹ ವಿಷಯಗಳನ್ನು ದೇವರ ಅನುಗ್ರಹ ಎಂದು ಹೇಳಿಬಿಡುತ್ತಾರೆ. ಆದರೆ ಪಾಶ್ಚಾತ್ಯ ವಿಜ್ಞಾನಿಗಳು ಇದನ್ನು Parapsychology ಅಂತ ಕರೆದು, ಇದನ್ನು ನಿಷ್ಪಕ್ಷಪಾತವಾಗಿ ಅಧ್ಯಯನ ಮಾಡಿದ್ದಾರೆ. ತಮ್ಮಲ್ಲಿ ಈ potential ಇದೆಯೆ ಎನ್ನುವದನ್ನು ನಾವೇ ಪರಿಕ್ಷೆ ಮಾಡಿ ನೋಡಿಕೊಳ್ಳಬಹುದು. (ಪುಸ್ತಕಗಳು ಸಿಗುತ್ತವೆ). ಇದ್ದರೆ ಅದನ್ನು ಅಭಿವೃದ್ಧಿಪಡಿಸಬಹುದು.
March 13, 2008 9:03 AM

ಶಾಂತಲಾ ಭಂಡಿ said...
suptadeeptiಅವರೆ...
ಕುತೂಹಲ ಕಾಡುತ್ತಿದೆ ಖಾಲಿ ಕಾಗದದ ಚೂರು ನಿಮ್ಮ ಕೈಯಲ್ಲಿ ಹೇಗೆ ಬಂತೆಂದು!
ಒಮ್ಮೊಮ್ಮೆ ಕನಸುಗಳು ವಿಚಿತ್ರವಾಗಿರುತ್ತವೆ. ನಾವು ಕಂಡ ಕನಸು(ಹಗಲುಗನಸಲ್ಲ) ನಮ್ಮ ಹತ್ತಿರದಲ್ಲೆಲ್ಲೋ ನನಸಾದ ವಿಷಯ ತಿಳಿದಾಗ ನಾನು ಅಚ್ಚರಿಪಟ್ಟಿದ್ದಿದೆ. ಕೆಲವರ ಮುಂದೆ ಈ ವಿಷಯಗಳನ್ನು ನಾವು ಹೇಳಹೋದರೆ ನಮ್ಮನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ (ವಿಜ್ಞಾನವನ್ನೂ ಓದಿರದ, ಮೂಢನಂಬಿಕೆಗಳೆಂದು ನಂಬಲರ್ಹವಾದವುಗಳನ್ನೂ ಹೀಗಳೆಯುವಂಥ ಜನರು). ಸುಮ್ಮನಿದ್ದುಬಿಡುತ್ತೇನೆ ಎಷ್ಟೋ ಸಾರಿ. ವಾದಿಸಿ ಗೆಲ್ಲುವ ಸಾಮರ್ಥ್ಯ ನನ್ನಲ್ಲಿ ಇಲ್ಲದಿರುವುದರಿಂದ ಹಾಗೂ ಸೋಲುವ ಮನಸ್ಸು ಸಹ ಇಲ್ಲದಿರುವುದರಿಂದ.
ಇಂಥಹ ಕುತೂಹಲಕಾರಿ ವಿಷಯಗಳನ್ನು ಬರೆಯುತ್ತಿರಿ. ಓದುತ್ತಿರುತ್ತೇವೆ.
March 13, 2008 11:49 AM

ಸುಪ್ತದೀಪ್ತಿ suptadeepti said...
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಕಾಕಾ, ತೇಜು, ಶಾಂತಲಾ: ನಾನು ಕಂಡ ಈ ಕನಸಿನ ಗುಂಗು ನನ್ನನ್ನು ಇನ್ನೂ ಕಾಡುತ್ತಿದೆ. ಅದರ ಮುಂದೆ-ಹಿಂದೆ-ಒಳ-ಹೊರಗುಗಳ ವಿಶ್ಲೇಷಣೆಯ ಪ್ರಯತ್ನದಲ್ಲಿ ಇದ್ದೇನೆ. ಇದುವರೆಗೆ ಏನೂ ಸಿಕ್ಕಿಲ್ಲ, ಸಿಕ್ಕರೆ ಇಲ್ಲೇ ಬರೆಯುತ್ತೇನೆ.
ಅಲ್ಲದೆ, Parapsychology -or- Mind Power ಬಗ್ಗೆಯೂ ಇನ್ನೂ ಹೆಚ್ಚಿನ ಅರಿವು ಪಡೆಯುವ ಪ್ರಯತ್ನದಲ್ಲೂ ಇದ್ದೇನೆ. ಇನ್ನೊಂದೆರಡು ವಾರದಲ್ಲಿ ಅದು ಒಂದು ಹಂತ ತಲುಪುತ್ತದೆ. ಆಮೇಲೆ... ಆಮೇಲೆ ನೋಡೋಣ.

ತೇಜು, ಶಾಂತಲಾ, ನನ್ನ ಕೈಯಲ್ಲಿದ್ದದ್ದು ಖಾಲಿ ಕಾಗದದ ಚೂರು, ಏನೂ ಬರೆದಿರಲಿಲ್ಲ.
ಅವಿನಾಶ್, ಸ್ವಾಗತ. ಧನ್ಯವಾದಗಳು ಕೂಡಾ. ಹೀಗೇ ಬರುತ್ತಿರಿ, ಬರೆಯುತ್ತಿರಿ.
March 13, 2008 2:21 PM

ತನ್ಮಯಿ said...
coincidence ಅನ್ನಿಸುತ್ತಿದೆ. ನಿನ್ನೆ ನನಗೆ ಬಿದ್ದ ಕನಸೊಂದರಿಂದ, ಕನಸುಗಳು, ಅವುಗಳ ಅರ್ಥಗಳ ಬಗ್ಗೆ ಬೆಳಿಗ್ಗೆಯಲ್ಲಾ ಗೂಗಲಿಸುತ್ತಿದ್ದೆ. ಈಗ ನಿಮ್ಮ ಬ್ಲಾಗಿನಲ್ಲಿಯೂ ಅದೇ 'ಅರಿವಿನಾಚೆಯ ಲೋಕ' ಓದುತ್ತಿದ್ದೇನೆ. ಈ ಬಗ್ಗೆ ನಿಮ್ಮ ಮುಂದಿನ ಒಂದೆರಡುವಾರಗಳ ನಂತರದ ಬರಹಕ್ಕಾಗಿ ಕಾಯುತ್ತಿರುತ್ತೇನೆ.
March 13, 2008 6:46 PM

ಸುಪ್ತದೀಪ್ತಿ suptadeepti said...
ತನ್ಮಯಿ: ಮುಂದಿನ ಎರಡು ವಾರಗಳಲ್ಲಿ ನನ್ನ ಕಲಿಕೆ ಒಂದು ಹಂತ ತಲುಪುತ್ತದಷ್ಟೇ. ಆದ್ರೆ, ಅದರ ಬಗ್ಗೆ ಬರೆಯಬಲ್ಲೆನೇ, ಗೊತ್ತಿಲ್ಲ. ಸಾಧ್ಯವಾದಾಗ ಖಂಡಿತಾ ಬರೆಯುತ್ತೇನೆ.
ಇನ್ನು, ನಾವೆಲ್ಲರೂ "ಗೂಗಲೋಪನಿಷತ್ತಿನ" ಆರಾಧಕರೇ.
March 13, 2008 10:30 PM

parijata said...
ಅಬ್ಬಬ್ಬಾ! ಓದುವಾಗ ಸಣ್ಣಗೆ ನಡುಗುತ್ತಿದ್ದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ.
March 14, 2008 1:05 AM

Vanamala said...
ನಿಮ್ಮ ಕನಸಿನ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೀರಿ. ತುಂಬ ಚೆನ್ನಾಗಿ ಬಂದಿದೆ.
March 14, 2008 7:40 AM

ಸುಪ್ತದೀಪ್ತಿ suptadeepti said...
ಪಾರಿಜಾತ, ವನಮಾಲಾ: ಪ್ರತಿಕ್ರಿಯೆಗೆ ಧನ್ಯವಾದಗಳು.
ವನಮಾಲಾ, ನನ್ನ ಅಕ್ಷರ ಲೋಕಕ್ಕೆ ಸ್ವಾಗತ. ಹೀಗೇ ಬರುತ್ತಿರಿ, ಬರೆಯುತ್ತಿರಿ.
March 14, 2008 9:32 AM

ನಾವಡ said...
ಜ್ಯೋತಿಯವರೇ, ಕನಸೇ ವಿಚಿತ್ರ. ಅದನ್ನು ಸಚಿತ್ರವಾಗಿ ಬರೆದ ಬಗೆಯೂ ಅಚ್ಚರಿ ಎನಿಸಿತು. ಒಳ್ಳೆ ಬರಹ ನೀಡಿದ್ದಕ್ಕೆ ಧನ್ಯವಾದ. ನನ್ನ ಬ್ಲಾಗ್ ಹೆಸರನ್ನು ನಿಮ್ಮ ಲಿಸ್ಟ್ ನಲ್ಲಿ ಸೇರಿಸುವಂತೆ ಮನವಿ.
ನಾವಡ
March 15, 2008 10:23 AM

ಸುಪ್ತದೀಪ್ತಿ suptadeepti said...
ನಾವಡರೇ, ಆಶ್ಚರ್ಯಕರವಾಗಿ ಕಂಡು ಬಂದ ಸವಿವರ ಕನಸನ್ನು ಹಾಗಿಂದ ಹಾಗೇ ಬರಹಕ್ಕಿಳಿಸಿ ನಿಮಗೆಲ್ಲ ಬಡಿಸಿದ್ದೇನೆ. ಮೆಚ್ಚಿದರೆ ಖುಷಿ; ಬೆಚ್ಚಿದರೆ ಅಚ್ಚರಿ ಇದ್ದದ್ದೇ.
ನಿಮ್ಮ ಚೆಂಡೆ-ಮದ್ದಳೆ ನನ್ನ ಸಹಚರರ ಸಾಲಿನಲ್ಲಿ ಖುಷಿ ಕೊಡಲಿದೆ.
March 16, 2008 8:58 PM

NilGiri said...
ಯಪ್ಪಾ... ಓದುವಾಗ ಮೈ ಸಣ್ಣಗೆ ಗಡಗಡ!
March 17, 2008 8:22 PM

ಸುಪ್ತದೀಪ್ತಿ suptadeepti said...
ಗಿರಿಜಾ (ನಿಮ್ಮ ಬ್ಲಾಗಿನಿಂದ ಆ ಹೆಸರು ಗೊತ್ತಾಯ್ತು. ನಿಮ್ಮ pen-name, "nilgiri" ಚೆನ್ನಾಗಿದೆ. ಒಳ್ಳೆಯ ಜೋಡಣೆ), ಭಯ ಬೇಡ. ಅದು ಬರೀ ಕನಸು!!
March 17, 2008 8:49 PM

L said...
ಕನಸಾದರೇನಂತೆ ಅದನ್ನು ಹೆಣೆದು ನಂತರ ಸುಂದರ ಕಥನವಾಗಿಸಿದ್ದೀರಿ. ಇನ್ನೂ ಹೆಚ್ಚಿನ ರೆಕ್ಕೆ ಪುಕ್ಕ ಸಿಕ್ಕರೆ, "ಹ್ಯಾರಿ ಪಾಟರ್" ತರವೇ ಕನ್ನಡದಲ್ಲೊಂದು "ಗರಿ-ಕನ್ಯೆ" ಹುಟ್ಟಿ ಬಂದಾಳು. ಹಾಗಾಗಲೆಂದು ಹಾರೈಸುತ್ತ
ಗಣಪತಿ
March 18, 2008 1:14 PM

ಸುಪ್ತದೀಪ್ತಿ suptadeepti said...
ಗಣಪತಿ, ತುಂಬಾ ದೊಡ್ಡ ಹಾರೈಕೆಯನ್ನೇ ಆರಿಸಿದ್ದೀರಿ. ಸದ್ಯಕ್ಕೆ ಆ ಕನ್ಯೆ ಕಾಣಲಾರಳೇನೋ? ಆಶಯಕ್ಕೆ ಧನ್ಯವಾದಗಳು.
March 18, 2008 3:57 PM

ಅರ್ಚನಾ said...
wow..eshtondu sogasaada baraha!!
oduttiddante bereye lokadalli iddante bhaasavaayitu.. kaialli cheeti iddudara bagge odi bahaLa acchari aayitu..
March 19, 2008 8:58 PM

ಸುಪ್ತದೀಪ್ತಿ suptadeepti said...
ಧನ್ಯವಾದ ಅರ್ಚನಾ.
March 19, 2008 10:56 PM

ಮಾರಾಟಕ್ಕಿವೆ....

Saturday, March 8, 2008

(ಮಾರ್ಚ್ ೦೮- ಜಾಗತಿಕ ಮಹಿಳಾ ದಿನ.
ಈ ರಚನೆ-- ನಮ್ಮ-ನಿಮ್ಮೂರಿನ ಗಲ್ಲಿಗಳಲ್ಲಿನ
ಚಂಪ, ಮಲ್ಲಿ, ಜಾಜಿ, ಗುಲಾಬಿ, ಸೇವಂತಿಯರಿಗೆ...)

ನಮ್ಮ-ನಿಮ್ಮೂರಿನಲಿ ಸಂತೆ ಸೇರುವ ದಿನ
ಘಮಘಮಿಸಿ ನಳನಳಿಸಿ ಕಣ್ಸೆಳೆವ ಗಲ್ಲಿ
ಹೂವಾಡಿಗರೆಲ್ಲ ಮಾರುವರು ಹೊರೆ ತಂದು
ಚಂಪ, ಮಲ್ಲಿಗೆ, ಜಾಜಿ, ಗುಲಾಬಿಗಳನಿಲ್ಲಿ

"ಹೂವು ಬೇಕೇ ಹೂವು..." ಭಾವ ಬಣ್ಣವು ನೂರು
ಯಾವ ದೇವನ ಪಾದ, ಮತ್ತಾರ ಮುಡಿಗೆ
ಕಣ್ಣು-ಮನಗಳ ತಣಿಸಿ, ನಲ್ಮೆ ಪ್ರೀತಿಯ ಉಣಿಸಿ
ಅಲ್ಪ ಬಾಳಿನ ಚಣಕೆ ಸಾರ್ಥ ಘಳಿಗೆ

ಹೊತ್ತ ಗಿಡಕೊಂದೊಂದೂ ಹೆಸರಾಗಿ ಅರಳಿದವು
ಹೆತ್ತಬ್ಬೆಗೆಂದೆಂದು ತನ್ನ ಕುಡಿ ಭಾರವೆ?
ಚಿತ್ತ ಕಲಕಿದ ಕೈಗೆ ಸೇರಿದ ಕ್ಷಣದಲ್ಲಿ
ಅತ್ತವೆ? ನಕ್ಕವೆ - ಸಾಫಲ್ಯವೆಂದು?

ಸೃಷ್ಟಿ ಲೀಲೆಯ ನೋಡ, ಫಲ ಹೊರುವ ಕ್ಷೇತ್ರವದು
ಯಾರ್ಯಾರ ಕೈಸೇರಿ ನಲುಗಿ ಕರಗಿದವು
ದೇವ ಪೂಜೆಯ ಪುಣ್ಯ ಯಾವ ಪಾಪದ ಲೆಕ್ಕ?
ಮಂಗಲೆಯ ಸಿಂಗರಕೆ ಮೀಸಲೇ ಬಾಳು?

ಅರೆಬಿರಿದ ನಸುನಗೆಯ ಕನಸಲ್ಲಿ ಹಿಡಿವರೆ
ಕನಸುಗಳ ಶವಯಾತ್ರೆಗೂ ಬೇಕಾದವು
ಚೈತ್ರ ಚೈತನ್ಯದೊಳು ಚಂದಗಾಣುವರೆಲ್ಲ
ಮಾಘ ಮಘಮಘಿಸದೆಯೆ ಬಾಳು ಬೋಳು
(೦೧-ಮಾರ್ಚ್-೨೦೦೧)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:01 AM
Labels:

8 ಪತ್ರೋತ್ತರ:
decemberstud said...
ಆಹ್.... ಇದನ್ನೇ ನಾನು ಹೇಳಿದ್ದು.. ಓದುತ್ತಿದ್ದ ಹಾಗೇ "J" ಕವಿತೆ ಅನ್ನಿಸಬೇಕು ಅಂತ. ಸಖತ್ತಾಗಿದೆ....
March 8, 2008 10:19 PM

sunaath said...
ದೀಪ್ತಿ, ಸಂಕೀರ್ಣ ಭಾವನೆ, ಸಂಕೀರ್ಣ ಪ್ರತೀಕ ಬೆರೆತ ಸಂಕೀರ್ಣ ಕವನ!
March 9, 2008 12:54 AM

ಸುಪ್ತದೀಪ್ತಿ suptadeepti said...
ಡಿ.ಎಸ್. ಮತ್ತು ಸುನಾಥ್ ಕಾಕಾ, ಇಬ್ಬರಿಗೂ ಧನ್ಯವಾದಗಳು.
March 9, 2008 9:39 PM

ತೇಜಸ್ವಿನಿ ಹೆಗಡೆ said...
ಅಕ್ಕ, ನೋವದುಂಬಿ ನಲಿವು ಬೀರಿ ನಗುತ ನಗಿಸುವ ಕವನ..
ಕಣ್ತುಂಬಿ ಬಂತು.
ನಿಮ್ಮ "ಹೀಗೊಂದು ಯೋಚನೆ" ತುಂಬಾ ಇಷ್ಟವಾಯಿತು. ನೆನಪಿಟ್ಟುಕೊಳ್ಳುವೆ.
March 9, 2008 11:32 PM

ಮನಸ್ವಿನಿ said...
ಅಕ್ಕ, ಚಂದ ಇದೆ.
’ಹೊತ್ತ ಗಿಡಕೊಂದೊಂದೂ ಹೆಸರಾಗಿ ಅರಳಿದವು
ಹೆತ್ತಬ್ಬೆಗೆಂದೆಂದು ತನ್ನ ಕುಡಿ ಭಾರವೆ?
ಚಿತ್ತ ಕಲಕಿದ ಕೈಗೆ ಸೇರಿದ ಕ್ಷಣದಲ್ಲಿ
ಅತ್ತವೆ? ನಕ್ಕವೆ - ಸಾಫಲ್ಯವೆಂದು?’
ಸಿಕ್ಕಾಪಟ್ಟೆ ಇಷ್ಟ ಆದವು ಈ ಸಾಲುಗಳು.
March 10, 2008 8:20 AM

ಸುಪ್ತದೀಪ್ತಿ suptadeepti said...
ತೇಜು, ಸು, ಇಬ್ಬರಿಗೂ ಧನ್ಯವಾದಗಳು.
March 10, 2008 9:28 AM

ಸಿಂಧು Sindhu said...
ಸುಪ್ತದೀಪ್ತಿ,
ಆಶಯ ಇಷ್ಟ ಆಯಿತು.ಎಷ್ಟು ಚೆನ್ನಾಗಿ ನೇಯುತೀರಿ ಹೂವ ಮಾಲೆ!
ಅತ್ತವೆ ನಕ್ಕವೆ ಸಾಫಲ್ಯವೆಂದು.. ತುಂಬ ಚೆನಾಗಿ ಮೂಡಿ ಬಂದಿದೆ.
ಪ್ರೀತಿಯಿಂದ
ಸಿಂಧು
March 12, 2008 10:02 AM

ಸುಪ್ತದೀಪ್ತಿ suptadeepti said...
ಸಿಂಧು, ಧನ್ಯವಾದ ಕಣೇ.
March 12, 2008 2:07 PM

ನಿಮ್ಮ ಪರಿಚಯದ ಎಳೆ ಯಾವುದು?

Sunday, March 2, 2008

ಸ್ವಲ್ಪ ಸಮಯದ ಹಿಂದೆ ಇಲ್ಲಿನ ಟಿ.ವಿ.ಯಲ್ಲಿ ಒಂದು ಮೋಜಿನ ಆಟ ಬರುತ್ತಿತ್ತು- "ಈಸ್ ದ್ಯಾಟ್ ಯುವರ್ ಐಡೆಂಟಿಟಿ?" ಯಾವಾಗಾದರೊಮ್ಮೆ ಅದನ್ನು ನೋಡುತ್ತಿದ್ದೆ. ಹನ್ನೆರಡು ಜನ ಆಕರ್ಷಕವಾಗಿ ದಿರಿಸು ಧರಿಸಿ ನಿಂತಿದ್ದರೆ ಒಬ್ಬ ನಿಯಂತ್ರಕ, ಒಬ್ಬ ಆಟಗಾ(ರ/ರ್ತಿ). ಹನ್ನೆರಡು ಜನರಿಗೆ ಅವರವರದ್ದೇ ಆದ ಪರಿಚಯಾತ್ಮಕ ನಿಲುವುಗಳು, ಅದಕ್ಕೆ ಸರಿಯಾದ ಹೇಳಿಕೆಗಳು. ಈ ಹನ್ನೆರಡು ಹೇಳಿಕೆಗಳನ್ನು ದೊಡ್ಡದಾಗಿ ಬರೆದಿಟ್ಟಿರುತ್ತಾರೆ. ಆಟಗಾರ ವ್ಯಕ್ತಿಯನ್ನು ಹೇಳಿಕೆಯೊಂದಿಗೆ ಹೊಂದಿಸಬೇಕು. ಪ್ರತೀ ಸರಿ ಹೆಜ್ಜೆಗಳಿಗೆ ಒಂದಷ್ಟು ಹಣ. ತಪ್ಪಾದರೆ, ಎಲ್ಲವನ್ನೂ ಕಳೆದುಕೊಂಡು ಮನೆಗೆ ನಡೆಯಬೇಕು. ಯಾವುದೇ ಹಂತದಲ್ಲಿ ಆಟ ಹಿಂದೆಗೆದುಕೊಂಡು ಅದುವರೆಗೆ ಸಿಕ್ಕಿದ್ದ (ಅಥವಾ ಹಿಂದಿನ ಹಂತದವರೆಗೆ ಸಿಕ್ಕಿದ್ದ) ಹಣ ತೆಗೆದುಕೊಂಡು ಹೋಗುವ ಅವಕಾಶವೂ ಇದೆ. ಒಳ್ಳೆ ಮೋಜಿನ ಆಟ.

ಕೆಲದಿನಗಳ ಹಿಂದೆ ನನ್ನ ಗೆಳತಿಯೊಬ್ಬಳೊಡನೆ ಮಾತಾಡಿದ ನಂತರ, ನಮಗೆಲ್ಲರಿಗೂ ಇರುವ ಒಂದೊಂದು ರೀತಿಯ ಗುರುತುಗಳ ಬಗ್ಗೆ ಯೋಚನೆ ಹುಟ್ಟಿತು. ಆಗಲೇ ಈ ಟಿ.ವಿ. ಆಟವೂ ನೆನಪಾಯಿತು. ಅದೇ ಈ ಹರಟೆಗೆ ನಾಂದಿ.

ಇಲ್ಲಿ ನನ್ನದೇ ಕೆಲವಾರು ಪರಿಚಯಾತ್ಮಕ ರೇಖೆಗಳನ್ನು ಹಂಚಿಕೊಳ್ಳುತ್ತೇನೆ. ನಿಮಗೂ ಇಂತಹ ಕೆಲವು ಶಿರೋನಾಮೆಗಳು, ಪಾತ್ರಗಳು, ಬಿರುದುಗಳು, ಗುರುತುಗಳು ಇರಬಹುದು. ಅವನ್ನೆಲ್ಲ ಇಲ್ಲಿ ಹಂಚಿಕೊಳ್ಳುವಿರಾದರೆ ಸಂತೋಷ.

ಇದೀಗ ನನ್ನ ಸರದಿ....

ಮಗಳು, ಅಕ್ಕ, ವಿದ್ಯಾರ್ಥಿ, ಹೆಂಡತಿ, ಸೊಸೆ, ನಾದಿನಿ, ಅತ್ತಿಗೆ, ಗೃಹಿಣಿ, ಅಮ್ಮ, ಸ್ನೇಹಿತೆ, ಕವಯಿತ್ರಿ, ಅತಿಥಿ, ಆತಿಥೇಯಳು,... ಇಂಥವು ಇನ್ನೂ ಕೆಲವಾರು. ಇವುಗಳಲ್ಲಿ ನಾನು ಯಾವುದು ಹೌದು ಮತ್ತು ಯಾವುದಲ್ಲ ಅನ್ನುವಂತಿಲ್ಲ. ಎಲ್ಲವೂ ನಾನೇ; ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ನನ್ನ ಸಂಬಂಧ, ಪರಿಚಯ. ಈ ಪರಿಚಯಗಳಲ್ಲಿ ಕೆಲವಕ್ಕೆ ನಗುಮುಖವಿದ್ದರೆ ಇನ್ನು ಕೆಲವಕ್ಕೆ......!!

(೧) ನನ್ನ ಗೆಳತಿಯೊಂದಿಗಿನ ಆ ಹರಟೆಯಿಂದಲೇ ಶುರುಮಾಡುತ್ತೇನೆ....

ಕೆಲವು ವರ್ಷಗಳ ಹಿಂದೆ ಅವಳ ಅಪ್ಪ-ಅಮ್ಮ ಇಲ್ಲಿಗೆ (ಬೇ ಏರಿಯಾಕ್ಕೆ) ಬಂದಿದ್ದಾಗ ನನಗೂ ಅವರ ಪರಿಚಯವಾಗಿತ್ತು. ಏನೋ ಮಾತಿನ ನಡುವೆ, ತಮ್ಮ ಮಗಳು (ನನ್ನ ಸ್ನೇಹಿತೆ) ಹಾಗಲಕಾಯಿ ಮನೆಗೆ ತರುವುದಿಲ್ಲವೆಂದೂ, ತಮಗೆ ಅದು ಇಷ್ಟವೆಂದೂ ಹೇಳಿಕೊಂಡರು. ಇವಳ ಮಕ್ಕಳಿಗೆ, ಗಂಡನಿಗೆ ಹಾಗಲ ರುಚಿಸುವುದಿಲ್ಲ, ಹಾಗಾಗಿ ಅದಕ್ಕೆ ಆ ಮನೆಯಲ್ಲಿ ಪ್ರವೇಶವಿರಲಿಲ್ಲ. ಆ ಸಮಯದಲ್ಲಿ ನಾವು ಅವಳ ಮನೆಯ ಹತ್ತಿರದಲ್ಲೇ ಇದ್ದೆವು. ನಂತರದ ವಾರಗಳಲ್ಲಿ ನಾನು ಹಾಗಲ-ಪಲ್ಯ ಮಾಡಿದಾಗಲೆಲ್ಲ ಆ ಆಂಟಿ-ಅಂಕಲ್ ಅದರ ಪಾಲುದಾರರಾಗುತ್ತಿದ್ದರು. ಅವರ ಅಡುಗೆಗಿಂತ ಭಿನ್ನವಾಗಿದ್ದರಿಂದಲೂ, ಮಗಳ ಮನೆಯಲ್ಲಿ ದೊರೆಯದ್ದು ನನ್ನಿಂದ ದೊರೆತದ್ದರಿಂದಲೂ ಅವರಿಗೆ ತುಂಬಾ ಇಷ್ಟವಾಗಿತ್ತು.

ಈ ಸಂಗತಿ ನನಗೆ ಮರೆತೇ ಹೋಗಿತ್ತು, ಮೊನ್ನೆ-ಮೊನ್ನೆ ಸ್ನೇಹಿತೆ ಹೇಳುವತನಕ. ಅವಳ ಅಪ್ಪ-ಅಮ್ಮ ಮತ್ತೆ ಇಲ್ಲಿಗೆ ಮುಂಬೈಯಿಂದ ಬರುತ್ತಿದ್ದಾರೆ. ಅವರ ಜೊತೆ ಮಾತಾಡುತ್ತಾ ಇವಳು ಯಾಕೋ ನನ್ನ ಹೆಸರು ಹೇಳಿದ್ದಕ್ಕೆ ಅವರು, "ಓ ಅವಳಾ, ಕರೇಲಾ ಹುಡುಗಿ, ನಿನ್ನ ಸ್ನೇಹಿತೆ..." ಅಂದರಂತೆ. ಇದನ್ನು ಹೇಳುತ್ತಾ ಅವಳೂ, ಕೇಳುತ್ತಾ ನಾನೂ ನಕ್ಕೂ ನಕ್ಕೂ ಸುಸ್ತಾದೆವು. ಹಾಗೆ, ನನ್ನ ಒಂದು ಐಡೆಂಟಿಟಿ- "ಕರೇಲಾ ಹುಡುಗಿ", ನನ್ನ ಸ್ನೇಹಿತೆಯ ಅಪ್ಪ-ಅಮ್ಮನ ನೋಟದಲ್ಲಿ.

(೨) ಇತ್ತೀಚೆಗೆ ನನ್ನ ಇನ್ನೊಂದು ಸ್ನೇಹಿತೆಗೆ ಮಗುವಾಯಿತು. ಹೆರಿಗೆಯ ಬಳಿಕ ಆಸ್ಪತ್ರೆಯಿಂದ ತಾಯಿ-ಮಗು ಮನೆಗೆ ಬಂದಾಗ ಅವರನ್ನು ಮನೆಯೊಳಗೆ ಕರೆದುಕೊಳ್ಳುವ ಮೊದಲು ಒಂದು ಪುಟ್ಟ ಲೋಟದಲ್ಲಿ ಅರಶಿನ-ಕುಂಕುಮ ಕದಡಿದ ನೀರನ್ನು ಅವರ ಮೇಲೆ ನಿವಾಳಿಸಿಕೊಂಡು ತಾಯಿ-ಮಗುವನ್ನು ಮನೆಯೊಳಗೆ ಬರಹೇಳಿದೆ. ಗೆಳತಿಯ ಗಂಡ ಇದನ್ನೆಲ್ಲ ಹ್ಯಾಂಡಿಕ್ಯಾಮ್'ನಲ್ಲಿ ಸೆರೆಹಿಡಿದಿದ್ದ. ಹಲವು ದಿನಗಳ ಬಳಿಕ ಈ ನನ್ನ ಸ್ನೇಹಿತೆ ಮಾತಾಡುತ್ತಾ, "ನಿಮ್ಮ ಪರಿಚಯ ನಮ್ಮಿಬ್ಬರ ಮನೆಯವರಿಗೂ ಚೆನ್ನಾಗಿ ಆಗಿದೆ. ನೀವು ಲೋಟದಲ್ಲಿ ಕದರಾರತಿ ಮಾಡಿದ್ದನ್ನು ನೆನಪಿಟ್ಟುಕೊಂಡಿದ್ದಾರೆ" ಅಂದಳು. "ಅದರಲ್ಲೇನು ವಿಶೇಷ? ನಿಮ್ಮಲ್ಲಿ ಆ ಕ್ರಮ ಇಲ್ಲವೆ?" ಕೇಳಿದ್ದಕ್ಕೆ, "ನಮ್ಮಲ್ಲಿ ಲೋಟದಲ್ಲಿ ಮಾಡಲ್ಲ, ತಟ್ಟೆಯಲ್ಲಿ ಮಾಡ್ತಾರೆ..." ಅಂದಳು. ಹೀಗೆ ನನ್ನ ಇನ್ನೊಂದು ಐಡೆಂಟಿಟಿ- "ಲೋಟದಲ್ಲಿ ಆರತಿ ಮಾಡಿದವಳು".


(೩) ಒಮ್ಮೆ ದಟ್ಸ್-ಕನ್ನಡದಲ್ಲಿ ಒಂದು ಲೇಖನ ಬರೆದ ಒಬ್ಬಳಿಗೆ ನಾನು ಮಿಂಚಂಚೆ ಕಳಿಸಿದೆ. ಅವಳಿಂದ ಬಂದ ಪತ್ರ: "ದಟ್ಸ್-ಕನ್ನಡದಲ್ಲಿ ಕವನಗಳನ್ನು ಲೇಖನಗಳನ್ನು ಬರೆಯುವ ಸುಪ್ತದೀಪ್ತಿಯೇ ನೀವಲ್ಲವ? ನೀಲಿ ಚೂಡಿದಾರ್ ಫೋಟೋ...?"
"ಹೌದು, ನೀಲಿ ಚೂಡಿದಾರ್ ಫೋಟೋ ನನ್ನದೇ" ಅಂದಿದ್ದೆ ಅವಳಿಗೆ. ಅಲ್ಲಿಗೆ ನನ್ನ ಇನ್ನೊಂದು ಐಡೆಂಟಿಟಿ- "ನೀಲಿ ಚೂಡಿದಾರ್".


(೪) ಏನೇನೋ ತರಗತಿಗಳಿಗೆ ಸೇರುತ್ತಾ, ಏನೇನನ್ನೋ ಕಲಿಯುತ್ತಾ ಇರೋದು ನನ್ನ ಹವ್ಯಾಸಗಳಲ್ಲಿ ಒಂದು. "ವೇರ್ ಡು ಯು ವರ್ಕ್?" ಅನ್ನುವ ಪ್ರಶ್ನೆಗೆ ಉತ್ತರ, "ಅಯಾಮ್ ಎ ಕಂಪಲ್ಸಿವ್ ಸ್ಟೂಡೆಂಟ್". ಅದು ಮತ್ತೊಂದು ಐಡೆಂಟಿಟಿ.

(೫) ಇನ್ನು ಸಮಯದ ದಾರಿಯಲ್ಲಿ ಸ್ವಲ್ಪ ಹಿಂದಕ್ಕೆ ಹೋದರೆ- ನಾವು ಭಾರತದಲ್ಲಿದ್ದಾಗ, ನನಗೆ ಹಲವರ ಪರಿಚಯ, ಸ್ನೇಹ ಲಭಿಸಿತ್ತು. ಅವರಲ್ಲಿ ಕೆಲವರು ನನ್ನ ಕವನಗಳನ್ನು ಮೆಚ್ಚುತ್ತಿದ್ದರು. ಕೆಲವರು ಏನೂ ಹೇಳದೆ ಸುಮ್ಮನಿದ್ದರು. ಇನ್ನು ಕೆಲವು "ಫೇಮಸ್" ಕವಿ/ಕವಯಿತ್ರಿಯರು ಸಾರಾಸಗಟಾಗಿ ನನ್ನ ಕವನಗಳಿಗೆ "ಸಕಾಲಿಕ ಬರಹಗಳಲ್ಲ. ಶೈಲಿ ಸರಿಯಿಲ್ಲ. ಆಧುನಿಕತೆ ಇಲ್ಲ. ನವೋದಯ ಕಾಲದಲ್ಲಿ ಹುದುಗಿ ಹೋದವುಗಳು." ಅಂತೆಲ್ಲ ಪಟ್ಟಿ ಹಚ್ಚಿದ್ದರು. "ಆದಿಕಾಲದ ಗೌರಮ್ಮ" ಅಂತಲೂ ಕರೆದರು. "ಅಮೆರಿಕಾದಲ್ಲಿದ್ದು ಬಂದರೂ ನೀನು ಅಡುಗೂಲಜ್ಜಿ ಗೌರಮ್ಮ" ಅಂತ ಒಬ್ಬರು ಅಂದರು. ಇವೆರಡೂ ನನ್ನ ಐಡೆಂಟಿಟಿಗಳೇ ತಾನೇ (ಅವರ ದೃಷ್ಟಿಯಲ್ಲಿ!)?


(೬) ಇನ್ನೂ ಸ್ವಲ್ಪ ಹಿಂದಕ್ಕೆ ಹೋದರೆ, ನಾನು ಕಾಲೇಜು ಸೇರಿದ ಮೊದಲಲ್ಲಿ, ನಮ್ಮ ಮನೆ-ತೋಟ ಎಲ್ಲವೂ ಹೊಸದು (ಆವಾಗಷ್ಟೇ ಅಪ್ಪ ಮನೆ ಕಟ್ಟಿಸಿದ್ದರು. ಅಮ್ಮ, ನಾನು ಸೇರಿ ತೋಟ ಮಾಡಿದ್ದೆವು). ತೋಟದ ತುಂಬಾ ನಾಲ್ಕೈದು ಥರದ ಗುಲಾಬಿಗಳು. ಗಿಡಗಳ ಗೆಲ್ಲುಗಳು ಮುರಿದು ಬೀಳುವಷ್ಟು ಹೂಗಳು. ನನಗೋ ಹೂವಿನ ಹುಚ್ಚು (ಮೊದಲಿಂದಲೂ. ಪ್ರೈಮರಿ ಶಾಲೆಯಲ್ಲಿ ನಾನು "ಹೂವಿನ ಹುಡುಗಿ"ಯಾಗಿದ್ದೆ). ದಿನಾ ಒಂದೊಂದು ಗುಲಾಬಿ, ಮನೆದೇವರ ಪೂಜೆಯ ನಂತರ ನನ್ನ ಜಡೆಗೆ. ಹ್ಮ್... ತಿಂಗಳ ಆ ದಿನಗಳಲ್ಲಿ ಅಪ್ಪ ದೇವರ ಮೇಲಿನ ಹೂ ಕೊಡದಿದ್ದಾಗ, ಗಿಡದಿಂದಲೇ ಕಿತ್ತು ಮುಡಿಯುತ್ತಿದ್ದೆ. ಪಿ.ಯು.ಸಿ. ಓದಿದ ಎರಡು ವರ್ಷಗಳಲ್ಲಿ ಬಹುಶಃ ನನ್ನ ಜಡೆಯಲ್ಲಿ ಗುಲಾಬಿ ತಪ್ಪಿರಲಿಲ್ಲ. ಇದನ್ನು ಗಮನಿಸಿದ್ದ ಒಂದು ಗೆಳತಿ ಕೊನೆಕೊನೆಗೆ ನನ್ನನ್ನು "ಗುಲಾಬಿ ಹುಡುಗಿ" ಅಂತಲೇ ಕರೆಯುತ್ತಿದ್ದಳು. ಐಡೆಂಟಿಟಿಯ ಪಟ್ಟಿಯಲ್ಲಿ ಅದೂ ಇದೆ.

(೭) ನಾನು ಕನ್ನಡ ಸ್ನಾತಕೋತ್ತರ ಪರೀಕ್ಷೆ (ಸಂಸಾರದಲ್ಲಿ ಕೆಲವರ ಅಸಹನೆಯ ಹೊರತಾಗಿಯೂ) ಮುಗಿಸಿದಾಗ ನನ್ನ ಸಂಬಂಧಿಯಬ್ಬರು, "ನೀವು.... ಕನ್ನಡ.... ಎಮ್ಮೆ...." ಅಂತ ಬಿಡಿ ಬಿಡಿಯಾಗಿ ರಾಗ ಎಳೆದರು. ನಾನಂದೆ, "ಇಲ್ಲಪ್ಪ, ಎಮ್ಮೆ ಈಗ ಸಪೂರ ಆಗಿದೆ". ಆದ್ರೂ... ಅವರ ಧಾಟಿಯಲ್ಲಿ, ನಾನು ಕನ್ನಡ "ಎಮ್ಮೆ".

(೮) ಇತ್ತೀಚೆಗೆ ಬೇರೊಂದೂರಿನಲ್ಲಿ ನಡೆದ ಒಂದು ಸಾಹಿತ್ಯಗೋಷ್ಠಿಯಲ್ಲಿ ಒಬ್ಬರು ನನ್ನ ಬಳಿ ಬಂದು, "ನೀವು ಹ್ಯೂಸ್ಟನ್ "ಅಕ್ಕ-ಸಮ್ಮೇಳನ"ದ ಕವಿಗೋಷ್ಠಿಯಲ್ಲಿ "ವಯಸ್ಸು" ಕವನ ಓದಿದವರಲ್ವ?" ಅಂದರು (ಅಲ್ಲಿ ಆ ಕವನ ಓದಿದಾಗ ಇದ್ದುದಕ್ಕಿಂತ ಒಂದೂವರೆ ಪಟ್ಟು ನಾನು "ಅಡ್ಡಕ್ಕೆ" ಬೆಳೆದಿದ್ದರೂ ನನ್ನ ಗುರುತು ಹಿಡಿದರು).
ಅವರ ನೆನಪಿನ ಮೂಸೆಯಲ್ಲಿ "ವಯಸ್ಸು ಕವನ ಓದಿದವಳು" ಅನ್ನುವ ಐಡೆಂಟಿಟಿ ನನಗೆ.

ಸದ್ಯಕ್ಕೆ ಕೊನೆಯದಾಗಿ...
(೯) ಕೆಲವಾರು ತಿಂಗಳ ಬಳಿಕ ನನ್ನ ಗೆಳತಿಯೊಬ್ಬಳನ್ನು ಭೇಟಿಯಾದೆ. ನಾನು ಕಾಲೇಜಿಗೆ ಹೋಗುತ್ತಿರುವುದು ಆಕೆಗೆ ತಿಳಿದಿತ್ತು. ಕಲಿಯುತ್ತಿರುವ ವಿಷಯವೇನೆಂದೂ ತಿಳಿದಿತ್ತು. ಅದೇ ಹಿನ್ನೆಲೆಯಲ್ಲಿ ಆಕೆಯ ಚಟಾಕಿ: "ಡ್ರಮ್ಮಿಗೆ ಈಗ ಸ್ವಲ್ಪ ಶೇಪ್ ಬಂದಿದೆ, ಸೊಂಟ ಇದೆ ಅಂತ ಗೊತ್ತಾಗತ್ತೆ". ಸೋ, ಅವಳ ಪ್ರಕಾರ ನಾನು.... ಬೇಡ ಬಿಡಿ. ಪುನಃ ಹೇಳೋಕೆ ಇಷ್ಟ ಇಲ್ಲ.

ಇವತ್ತಿಗೆ ಇಷ್ಟು ಸಾಕು. ನಿಮ್ಮ ಅನುಭವ-ಅನುಭಾವಗಳನ್ನು ಹಂಚಿಕೊಳ್ಳಿ, ನಿಮ್ಮ ಕಿರೀಟದ ಗರಿಗಳನ್ನು ತೆರೆದಿಡಿ ಎಂದು ಕರೆಗೊಡುತ್ತಾ....
ಇಂತಿ,

ನಿಮ್ಮ ಸಹ-ಬ್ಲಾಗರ್.
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:00 PM
Labels: , ,

26 ಪತ್ರೋತ್ತರ:
parijata said...
ನಗುಮುಖದ, ನೇರವಾದ ಮಾತಿನ ಸ್ನೇಹಿತೆ...
March 3, 2008 12:46 AM

ಶಾಂತಲಾ ಭಂಡಿ said...
ಅಕ್ಕಾ... ಇದನ್ನ ಬಿಟ್ಟಿರಲ್ಲ!
http://shantalabhandi.blogspot.com/2007/12/blog-post_19.html
ಈ ಲಿಂಕಿನಲ್ಲಿ ನಗುತ್ತಿರುವ ಸಿಂಡರೆಲಾಳನ್ನು!
ಚಂದ್ರನಂತಹ ದೋಸೆ ಕೊಟ್ಟು ಸಿಹಿ ಜಾಮ್ ನಂತಹ ಪ್ರೀತಿ ಕೊಟ್ಟ ನನ್ನ ಅಕ್ಕಳ ಬಗ್ಗೆ ಏನೂ ಹೇಳಲೇ ಇಲ್ಲ. ಇದು ಅನ್ಯಾಯ. ನೋವನ್ನೆಲ್ಲ ಗಂಟು ಕಟ್ಟಿಟ್ಟು ನಲಿವನ್ನು ಮಾತ್ರ ಬಿಚ್ಚಿಟ್ಟು ಹಂಚಿಕೊಳ್ಳುವ ನಿಮ್ಮನ್ನು ಏನೆನ್ನಲಿ! ಇನ್ನೊಂದು ಸಾಲು ಖಂಡಿತ ಅವಶ್ಯ ಬೇಕಿತ್ತು ಈ ಲೇಖನಕ್ಕೆ- ಮೊನ್ನೆ ಮೊನ್ನೆ ಪಡೆದ ಆ ಒಂದು ಬಿರುದಿಗೆ ನೀವು ಅರ್ಹರಲ್ಲ, ನಿಮಗದು ಸಲ್ಲ ಎನ್ನುವ ಸಾಲು.
March 3, 2008 7:42 AM

ಸುಪ್ತದೀಪ್ತಿ suptadeepti said...
ಹೌದು ಪಾರಿಜಾತ, ನೀವು ಒಬ್ಬ ಒಳ್ಳೆಯ ಸ್ನೇಹಿತೆ. ಜೊತೆಗೆ- ಭಾವಜೀವಿ, ಸಹೃದಯಿ, ಕವಯಿತ್ರಿ, ಜ್ಞಾತೆ, ಗಣಕ-ತಂತ್ರಾಂಶ ತಜ್ಞೆ, ಸಂಗೀತಗಾರ್ತಿ, ಹಾಗೂ ಮತ್ತುಳಿದ ಮಗಳು, ಸಹೋದರಿ, ಮಡದಿ, ಮಾತೆ, ಸೊಸೆ... ಎಲ್ಲವೂ. ನಿಮ್ಮ ಬಗ್ಗೆ ನನಗೆ ಗೌರವ, ಪ್ರೀತಿಯಿದೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
ಶಾಂತಲಾ ಮರೀ, ನಿನ್ನ ಪ್ರೀತಿಯನ್ನು ಗೌರವವನ್ನು ಮರೆಯುವ ಪ್ರಶ್ನೆಯಿಲ್ಲ. ಅದನ್ನೆಲ್ಲ ಪಡೆಯುವ ಭಾಗ್ಯ ನನ್ನದಾಗಿದ್ದಕ್ಕೆ ನನಗೆ ತೃಪ್ತಿಯಿದೆ. ನೋವನ್ನು ಬದಿಗಿಟ್ಟು ನಲಿವನ್ನು ಹಂಚುವುದೇ ನಾನು ಪಾಲಿಸುವ ಧರ್ಮ.
ಇನ್ನು ಆ ಬಿರುದಿನ ಬಗ್ಗೆ- ಅದಕ್ಕೆ ಇಲ್ಲಿ ಸ್ಥಾನವೇ ಇಲ್ಲ, ಬಿಡು.
ನಿನ್ನ ಸ್ನೇಹಕ್ಕೆ, ಪ್ರೀತಿಗೆ, ಭಾವುಕತೆಗೆ, ಬರವಣಿಗೆಗೆ, ನಿನ್ನೊಳಗಿನ ಕವಯಿತ್ರಿಗೆ, ಕಥೆಗಾರ್ತಿಗೆ, ಪುಟ್ಟ ತಂಗಿಗೆ ನನ್ನೊಲವು.
March 3, 2008 12:45 PM

ಮಧು said...
ಸದಾ ನಗುತ್ತಾ, ನಗಿಸುತ್ತಾ, ನನ್ನ ಚಿಕ್ಕ ಪುಟ್ಟ ಪ್ರಯತ್ನಗಳಿಗೆಲ್ಲಾ ಪ್ರೋತ್ಸಾಹ ಕೊಟ್ಟು ಹುರಿದುಂಬಿಸುವ ದೊಡ್ಡಕ್ಕ....
March 3, 2008 5:51 PM

ಸುಪ್ತದೀಪ್ತಿ suptadeepti said...
ಮಧು, ನಿನ್ನ ಶುಧ್ದ ಮನಸ್ಸೂ ಅದಕ್ಕೆ ಕಾರಣ ಕಣೋ. ನನಗಿಂತ ಇಷ್ಟು ಚಿಕ್ಕವರೆಲ್ಲ ಈ ನಮ್ಮ ಭಾಷೆಯ ಬಗ್ಗೆ ಒಲವು ತೋರಿ ಅದನ್ನು ಬೆಳೆಸುತ್ತಾ ನಡೆಯುವುದನ್ನು ನೋಡಿ ನನಗಂತೂ ಖುಷಿಯಾಗುತ್ತಿದೆ. ಈ ಹೃದಯದಲ್ಲಿ ನಿನಗೂ ಜಾಗವಿದೆ.
March 3, 2008 6:04 PM

ಸುಪ್ತದೀಪ್ತಿ suptadeepti said...
ಅಲ್ಲಪ್ಪಾ, ನಿಮ್ಮ ಬಗ್ಗೆ ಹೇಳಿಕೊಳ್ಳಿ ಅಂದ್ರೆ, ಎಲ್ಲರೂ ಮತ್ತೆ ಮತ್ತೆ ನನ್ನ ಕಥೇನೇ ಕೊರೀತಿದ್ದೀರಲ್ಲ... ನಿಮ್ಮ ಕಿರೀಟದ ಗರಿಗಳನ್ನು ಸ್ವಲ್ಪ ತೋರಿಸಿ ನನಗೆ.
March 3, 2008 6:05 PM

Nempu.Guru said...
ಇಂತಹ ಬರಹ, ಕವನಗಳೇ ನನ್ನನ್ನು ದಿನಕ್ಕೊಂದು ಬಾರಿಯಾದರೂ ನಿಮ್ಮ ಬ್ಲಾಗಿಗೆ ಎಳೆದು ತರುವುದು. ಕೆಲಸದ ಒತ್ತಡದಲ್ಲಿ ಈ ಪ್ರಶ್ನೆಗಳನ್ನು ನನಗೆ ನಾನೇ ಕೇಳಿಕೊಳ್ಳದೆ ಅದೆಷ್ಟು ದಿನಗಳಾಯಿತು? ನನ್ನ ಬತ್ತಳಿಕೆಯಲ್ಲೂ "ಪಾಸಿಟಿವ್, ನೆಗೆಟಿವ್" ಬಿರುದುಗಳು ಸಾಕಷ್ಟಿವೆ. ಜೀವನದಲ್ಲಿ ಮುನ್ನುಗ್ಗಲು ಎರಡೂ ಬೇಕು :-)
March 3, 2008 7:12 PM

sunaath said...
ದೀಪ್ತಿ, ನಿನ್ನ ಮತ್ತೊಂದು identityಯನ್ನು ಮರೆತಿಯಾ?
ನೀನು ನನಗೆ online ಮಗಳು. ತಿರುಗಿಸಿ ಹೇಳುವದಾದರೆ ನಾನು online ಚಿಕ್ಕಪ್ಪ ಎನ್ನುವದು ನನ್ನ ಕಿರೀಟದ ಒಂದು ಗರಿ.
March 3, 2008 11:02 PM

Seema said...
ಸುಪ್ತದೀಪ್ತಿ ಅವರೇ, Identity ಗೆ ಬರಗಾಲವಿಲ್ಲ ಬಿಡಿ. ತುಸು ತೆಳ್ಳಗಿದ್ರೂ ಸಿಗತ್ತೆ, ತುಸು ದಪ್ಪಗಿದ್ರೂ ಸಿಗತ್ತೆ! ನನಗೂ ಇಂಥ identity ಗಳ ಕೊರತೆಯಾಗಿಲ್ಲ. ಕ್ರಿಶ್ಚಿಯನ್ನರ ತರ ಕಾಣುವವಳು, ತೆಳ್ಳಗಿನವಳು, ಬಿಳಿ ಚೂಡಿದಾರದವಳು, ಮಾತಾಡದವಳು, ಸೊಕ್ಕಿನವಳು, ಹೀಗೇ ಇನ್ನೂ ಏನೇನೋ.... ನಿಮ್ಮ ಬರಹ ಚೆನ್ನಾಗಿದೆ ಎಂದು ಹೇಳುವಷ್ಟು ನಾನು ದೊಡ್ದವಳಲ್ಲ, ಬೆಳೆದಿಲ್ಲ; ಓದಿ ಖುಷಿ ಆಗಿದ್ದು ಮಾತ್ರ ನಿಜ. ನನ್ನನ್ನು ಜನರು ಏನೆಲ್ಲ ಹೆಸರಿನಿಂದ ಕರೆಯುತ್ತಿದ್ದರು ಎಂಬುದೆಲ್ಲಾ ನೆನಪಾಯಿತು.
March 4, 2008 3:08 AM

ಮನಸ್ವಿನಿ said...
ಜ್ಯೋತಿ ಅಕ್ಕ,
ಚೆನ್ನಾಗಿದೆ ಈ ಬರಹ :) ನೆನಪಿದೆಯಲ್ಲ ’ತಲೆ ಬೊಂಡ ಮಾಡುವವರು ಬೇಕಾಗಿದ್ದಾರೆ’ - ಮೊದಲ ಸಲ ಫೋನಲ್ಲಿ ನೀವು ಕೇಳಿದ್ದು. ಸುಮಾರಷ್ಟಿವೆ ಅಡ್ಡ ಹೆಸರುಗಳು (ಎರಡೂ ತರದವು). ಇಲ್ಲಿ ಬೇಡ. :)
March 4, 2008 7:01 AM

ಸುಪ್ತದೀಪ್ತಿ suptadeepti said...
ಗುರು, ಸುನಾಥ್ ಕಾಕಾ, ಸೀಮಾ, ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳು.
ಹೌದು ಗುರು, ಜೀವನದಲ್ಲಿ positive, negetive ಎರಡೂ ಬೇಕಾಗುತ್ತೆ balance ಆಗಿ ಇರ್ಲಿಕ್ಕೆ, ಅಲ್ವಾ?

ಕಾಕಾ, ನಿಮ್ಮನ್ನು, ನಮ್ಮ ಹೊಸ ಬಂಧವನ್ನು ಮರೆತಿಲ್ಲ (ಎಲ್ಲವನ್ನೂ ಹೇಳ್ತಾ ಕೂತ್ರೆ ಓದೋರಿಗೆ ಕೊರೆತ ಆಗ್ಬಾರ್ದಲ್ಲ, ಅದಕ್ಕೆ ಹೇಳಿಲ್ಲ). ಅದು ನಿಮ್ಮ ಗರಿ ಅಂತ ಹೇಳಿ ನನ್ನನ್ನು ಸಂಕೋಚಕ್ಕೆ ಹಾಕಿದ್ದೀರಿ.

ಸೀಮಾ, ನಮ್ಮಮ್ಮ ತುಂಬಾ ತೆಳ್ಳಗಿದ್ದಾಗ ಅವರನ್ನು "ತಲಕೆ" (ಅಡಕೆ ಮರದ ಸೀಳು) ಅಂತ ಕರೀತಿದ್ರು. ಬಹುಶಃ ಅದರಿಂದಾಗಿಯೋ ಏನೋ, ನಾನು ತೆಳ್ಳಗಾಗೋದೇ ಇಲ್ಲ (ಮತ್ತೊಂದು ತಲಕೆ ಆಗಕ್ಕೆ ಇಷ್ಟ ಇಲ್ಲ!!). ಹಾಗೇನೇ, ನನ್ನ ದಟ್ಟ ಕಪ್ಪು ಗುಂಗುರು ಕೂದಲು ನೋಡಿ, ನನ್ನನ್ನು "ಮಲಯಾಳಿಯಾ?" ಅಂತ ಕೇಳಿದವರಿದ್ದಾರೆ. ಹೀಗೇ ಏನೇನೋ ಇರುತ್ತವೆ. ನಿಮ್ಮ "ಬಿರುದುಗಳನ್ನು" ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
March 4, 2008 5:24 PM

ತೇಜಸ್ವಿನಿ ಹೆಗಡೆ said...
ಅಕ್ಕ.. ಈ Identity ಹೇಳುವುದು ಎಲ್ಲರಿಗೂ ಕಟ್ಟಿಟ್ಟ ಬುತ್ತಿಯೇನೋ. ನಾನು ರಾತ್ರಿಗಳಲ್ಲಿ ಎಚ್ಚೆತ್ತಿರುವುದು ಹೆಚ್ಚು. ಕಾಲೇಜುದಿನಗಳಲ್ಲೂ ಓದುವುದೆಲ್ಲಾ ರಾತ್ರಿಯೇ ಮಾಡುತ್ತಿದ್ದೆ. ಒಟ್ಟಿನಲ್ಲಿ ನಿದ್ದೆ ಕಡಿಮೆ. ಹಾಗಾಗಿ ನನ್ನ "ನಿಶಾಚರಿ" ಎನ್ನುತ್ತಾರೆ ;) ಈಗ ನನ್ನ ಮಗಳಿಗೂ ರಾತ್ರಿ ನಿದ್ರೆ ಕಡಿಮೆ. ಹಾಗಾಗಿ ಅವಳಿಗೆ ಈಗಲೇ Identity ಬಂದಿದೆ.. "ನಿಶಾಚರಿ ಮಗಳು" ಎಂದು:)ಇನ್ನು ನನ್ನ ದೃಷ್ಟಿಯಲ್ಲಿ ನಿಮ್ಮ Identity ಏನೆಂದರೆ, ಪ್ರೀತಿಯ ಅಕ್ಕ:-)
March 5, 2008 7:53 AM

ಶ್ರೀವತ್ಸ ಜೋಶಿ said...
ಐಡೆಂಟಿಟಿಗೆ ಸಂಬಂಧಿಸಿದಂತೆ ಭದ್ರಗಿರಿ ಅಚ್ತುತದಾಸರು ಹರಿಕಥೆಯೊಂದರಲ್ಲಿ ಹೇಳಿದ ಈ ವ್ಯಾಖ್ಯಾನ ಚೆನ್ನಾಗಿದೆ.
ಶ್ರೀರಾಮನ ಐಡೆಂಟಿಟಿ ಯಾರ್ಯಾರಿಗೆ ಏನೇನು ಎಂಬುದರ ವಿವರಣೆ. ರಾಮರಕ್ಷಾಸ್ತೋತ್ರದಲ್ಲಿ ಬರುವ ಒಂದು ಶ್ಲೋಕ:
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ನಾಥಾಯ ರಘುನಾಥಾಯ ಸೀತಾಯಾಃ ಪತಯೇ ನಮಃ

ಶ್ರೀರಾಮನನ್ನು ಮಾತೆ ಕೌಸಲ್ಯೆ ಮಾತ್ರ ರಾಮ ಎಂದು ಕರೆಯುತ್ತಾಳೆ. ತನ್ನ ಹಿರಿಮಗ ಎಂಬ ಹೆಮ್ಮೆಯಿಂದ ದಶರಥ ಅವನನ್ನು ರಾಮಭದ್ರ ಎನ್ನುತ್ತಾನೆ. ಅಯೋಧ್ಯೆಯ ಪ್ರಜೆಗಳಿಗೆ ಅವನು ಸುಖ ಸಂತೋಷಗಳನ್ನು ಕೊಡುವ ತಂಪು ಚಂದಿರ - ಹಾಗಾಗಿ ರಾಮಚಂದ್ರ. ವಿಶ್ವಾಮಿತ್ರಾದಿ ಋಷಿಮುನಿಗಳಿಗೆ ಅವನು ವೇಧಸ (ವೇದಗಳನ್ನು ಅರೆದು ಕುಡಿದವನು). ಸೀತೆಗೆ ’ನಾಥ’. ರಘುಕುಲವಂಶಜರಿಗೆಲ್ಲ ಆತ ರಘುನಾಥ. ಆದರೆ... ಆದರೆ... (ಇದೇ ಇಂಪಾರ್ಟೆಂಟು) - ಮಿಥಿಲೆಯ ಜನರು ಮಾತ್ರ ಅವನನ್ನು "ನಮ್ಮ ಸೀತಮ್ಮನ ಗಂಡನಲ್ವೇ..." ಅಂತಲೇ ಐಡೆಂಟಿಸುವರು!
ತಾತ್ಪರ್ಯ: ಜಗನ್ನಿಯಾಮಕ ಶ್ರೀರಾಮಚಂದ್ರನಿಗೇ ಆರೀತಿ ವಿವಿಧ ಐಡೆಂಟಿಟಿಗಳಿರುವಾಗ ನಮಗೆಲ್ಲ ಇರುವುದು ವಿಶೇಷವಲ್ಲ!
March 5, 2008 11:31 AM

ಸುಪ್ತದೀಪ್ತಿ suptadeepti said...
ತೇಜು, ನಿಶಾಚರಿ ಪದವಿಗೆ ನಿನ್ನ ಜೊತೆ ನಾನೂ ಪಾಲುದಾರಳು. ಕಾಲೇಜಿನ ದಿನಗಳಲ್ಲಿ ನಾನೂ ಕೂಡಾ ರಾತ್ರೆಯೇ ಓದುತ್ತಿದ್ದೆ. ಹೇಳಿಕೊಂಡದ್ದಕ್ಕೆ ಧನ್ಯವಾದಗಳು.

ವತ್ಸ, ಶ್ರೀರಾಮನ ಈ ಐಡೆಂಟಿಟಿಗಳನ್ನು ಕೇಳಿದ್ದೆ, ಭದ್ರಗಿರಿಯವರ ಮಾತಲ್ಲೇ. ಅವರು ವಿವರಿಸುವ ರೀತಿಯೇ ಸೊಗಸು. ಅದ್ರಲ್ಲೂ ಆ ಕೊನೆಯ ಸಾಲು... "ನಮ್ ಸೀತಮ್ಮನ್ ಗಂಡಾಂತ..." ಸುಂದರ, ಮೋಹಕ. ಅದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
March 5, 2008 1:11 PM

ಸುಶ್ರುತ ದೊಡ್ಡೇರಿ said...
ಜ್ಯೋತೀಜಿ,
ನಮಸ್ಕಾರ. ಹೇಗಿದ್ದೀರಿ?ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ. ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
March 5, 2008 8:51 PM

sritri said...
ನನ್ನ ಪ್ರೀತಿಯ ಪುಟ್ಟ ದುನಿಯಾದಲ್ಲಿ ವ್ಯಂಗ್ಯ, ಕಟು ವಿಶೇಷಣಗಳಿಂದ ನನ್ನನ್ನು ಗುರುತಿಸುವವರಿಲ್ಲ. (ಇದ್ದರೂ ನನ್ನ ಅನುಭವಕ್ಕೆ ಬಂದಿಲ್ಲ) ನನಗೆ ಸಿಕ್ಕಿರುವ ಕೆಲವಾರು ವಿಶೇಷಣಗಳಲ್ಲಿ ದಟ್ಸ್ ಕನ್ನಡದಿಂದ ಉಡುಗೊರೆ ರೂಪದಲ್ಲಿ ಸಿಕ್ಕಿರುವ ಪರಿಚಯ "ತುಳಸಿಯಮ್ಮ". ಯಾರಾದರೂ ಈ ಹೆಸರಿನಿಂದ ಕರೆದರೆ ನನಗೆ ತುಂಬಾ ಸಂತೋಷವಾಗುತ್ತದೆ :)
March 6, 2008 6:51 AM

ಸುಪ್ತದೀಪ್ತಿ suptadeepti said...
ಸುಶ್ರುತ, ನಿಮ್ಮೆಲ್ಲ ಸ್ನೇಹಿತ ಬಳಗದ ಈ ಒಳ್ಳೆಯ ಪ್ರಯತ್ನಕ್ಕೆ ಇಲ್ಲಿಂದ ಶುಭ ಕೋರುತ್ತೇನೆ. ಕಾರ್ಯಕ್ರಮ ಯಶಸ್ವಿಯಾಗಲಿ. ಇನ್ನಷ್ಟು ಇಂಥ ಸಂಘಟನೆಗೆ, ಗೋಷ್ಠಿಗೆ ನಾಂದಿಯಾಗಲಿ.
ಹೃತ್ಪೂರ್ವಕ ಹಾರೈಕೆಗಳು ತಮ್ಮಾ.

ವೇಣಿ, ಕಾಮಧೇನುವಿನಂಥ ನಿನಗೆ ಯಾರಾದರೂ ಯಾಕೆ ವ್ಯಂಗ್ಯ, ಕಟು ಮಾತು ಆಡಿಯಾರು? ಆಮ್ಲಜನಕ ನೀಡುವ ತುಳಸಿವನದ ತುಳಸಿಯಮ್ಮನಾಗಿಯೇ ಖುಷಿಯಾಗಿರು.
March 6, 2008 5:51 PM

ಅಸತ್ಯ ಅನ್ವೇಷಿ said...
ನನ್ನ ಬಗ್ಗೆ ಹೇಳ್ಬೇಕಾದ್ರೆ... ಬೊ.ರ.ಣ್ಣ, ಅನ್ವೇಶಿ... ಉಹ್.... ಬೇಡ.... ಬೇಡ...ನಿಮ್ ಬಗ್ಗೆ ನೀವೇ ಕೆಲವು ಮರೆತ್ರಿ... ಲಹರಿ ಹರಿಸುವವರು, ಖಾಯಂ ವಿದ್ಯಾರ್ಥಿನಿ...
March 6, 2008 11:11 PM

parijata said...
"ನಮ್ಮ ಸೀತಮ್ಮನ ಗಂಡನಲ್ಲವೇ" ಅನ್ನುವ ಸಾಲು ನೋಡಿ ಶತಾವಧಾನಿ ಡಾಆರ್. ಗಣೇಶರ 'ಕವಿತೆಗೊಂದು ಕಥೆ' ಎಂಬ ಪುಸ್ತಕದಲ್ಲಿ ಹಿಂದೆ ಓದಿದ್ದ ಕಥೆ ಹೇಳಲೇಬೇಕೆಂದು ಮನಸ್ಸಾಯಿತು.
ಅಪ್ಪಯ್ಯ ದೀಕ್ಷಿತರು ಸಂಸ್ಕೃತದ ಹೆಸರಾಂತ ಅಲಂಕಾರಿಕರು, ದೈವಭಕ್ತರೂ ಆಗಿದ್ದು, 'ಕುವಲಯಾನಂದ' ಮುಂತಾದ ಕೃತಿಗಳನ್ನು ನಮಗೆ ಕೊಟ್ಟಿದ್ದಾರೆ. ಅವರ ಪತ್ನಿಯಾದ ಅಚ್ಚಮ್ಮನವರೂ ವಿದುಷಿ. ಅಚ್ಚಮ್ಮನವರ ಗ್ರಾಮದಲ್ಲಿ ಒಮ್ಮೆ ಒಂದು ಸಮಾರಂಭವಾದಾಗ ದೀಕ್ಷಿತರೂ ಪತ್ನಿಯೊಡಗೂಡಿ ಅಲ್ಲಿಗೆ ಹೋಗಿದ್ದರು. ಪ್ರಸಿದ್ಧ ವ್ಯಕ್ತಿಯಾಗಿದ್ದರೂ ಮುಖಪರಿಚಯವಿಲ್ಲದಿದ್ದ ಕೆಲವರಿಗೆ ದೀಕ್ಷಿತರ ಗುರುತು ಸಿಗಲಿಲ್ಲ. ನಂತರ "ಓಹೋ, ಇವರೋ, ನಮ್ಮ ಅಚ್ಚಮ್ಮನ ಗಂಡ!" ಎಂದು ಅವರನ್ನು ಗುರುತಿಸಿದರು. ತಮ್ಮ (ಅ)ಪ್ರಸಿದ್ಧಿಯನ್ನು ಗಮನಿಸಿದ ದೀಕ್ಷಿತರು 'ಅಸ್ಮಿನ್ ಗ್ರಾಮೇ ಅಚ್ಚಾ ಪ್ರಸಿದ್ಧಾ' (ಈ ಊರಿನಲ್ಲಿ ಅಚ್ಚಳೇ ಪ್ರಸಿದ್ಧಳು') ಎಂದು ಉದ್ಗರಿಸಿದರು. ಪೂರ್ಣ ಶ್ಲೋಕ ನನಗೆ ಮರೆತಿದೆ- ಸಿಕ್ಕಿದಾಗ ಬರೆಯುತ್ತೇನೆ.
March 6, 2008 11:43 PM

ಪಯಣಿಗ said...
ಮನಸ್ಸನ್ನ ಒ೦ದಿಷ್ಟು ನೆನಪಿನ ಹಿ೦ದೋಟಕ್ಕೊಯ್ಯುವ ಬರಹ. ವಯಸ್ಸು, ಬುದ್ಧಿ, ದೇಹ, ಸ೦ಬ೦ಧಗಳು ಬೆಳೆದ೦ತೆಲ್ಲ ಸುತ್ತಲಿನವರ ನೋಟಕ್ಕೆ-ಓಟಕ್ಕೆ ತಕ್ಕ೦ತೆ ನಮ್ಮ ಪರಿಚಯದ ಎಳೆ ಬದಲಾಗುತ್ತ ಹೋಗುತ್ತೆ, ಅಲ್ಲವೆ? ನಾಲ್ಕು ವರೆ ವರ್ಷಗಳ ಹಿ೦ದೆ ಮೊದಲ ಬಾರಿಗೆ 'ಅಕ್ಕ' ಎ೦ದು ನಿಮ್ಮ ದನಿಯ ಪರಿಚಯಮಾಡಿಸಿದವರ ದಿಕ್ಕು-ದೃಷ್ಟಿ ಬದಲಾಗಿದ್ದರೂ ನೀವು ನನಗೆ ಅಕ್ಕನಾಗಿಯೇ ಉಳಿದದ್ದು ನನ್ನ ಅದೃಷ್ಟ.
March 7, 2008 5:00 AM

ಸುಪ್ತದೀಪ್ತಿ suptadeepti said...
ಪಾರಿಜಾತ, ಕಥೆಯೊಂದನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

ಅಸತ್ಯಾನ್ವೇಷಿಗಳೇ, ನಿಮ್ಮ ಅಷ್ಟುದ್ದ ಹೆಸರಿನ ಒಂದಕ್ಷರಗಳನ್ನು ಹೇಳುವಾಗಲೇ "ಉಹ್" ಅಂತ ಏದುಬ್ಬಸ ಬಿಡುವಷ್ಟು ಕಷ್ಟವಾಯ್ತೇ? ಹಾಗಾದ್ರೆ, ಡಬ್ಬಲ್ ಧ.ವಾ.ಗಳಪ್ಪ!! ನನ್ನ ಹೆಸರುಗಳನ್ನೆಲ್ಲ ಇಲ್ಲಿ ಪಟ್ಟಿ ಮಾಡಿಲ್ಲ. ಸದ್ಯಕ್ಕೆ ಸಾಕು ಅಂದಿದ್ದೇನೆ. ಎಲ್ಲವನ್ನೂ ಹೇಳ್ತಾ ಕೂತ್ರೆ, "ಕೊರೆವ ಲಹರಿ" ಆಗ್ತದಲ್ಲ (ಅಥವಾ ಈಗ್ಲೇ ಆಗಿದೆಯೋ, ಗೊತ್ತಿಲ್ಲ).

ಪಯಣಿಗ, ನನ್ನ ತಮ್ಮಂದಿರ ಬಳಗ ಬೆಳೆಯುತ್ತಲೇ ಇದೆ. ತಮ್ಮಂದಿರ ಜೊತೆಗೇ ಬೆಳೆದ ನನಗೆ ಅದು ಖುಷಿಯ ಸಂಗತಿ. ಜೊತೆಜೊತೆಗೇ ತಂಗಿಯಂದಿರೂ ಸೇರಿಕೊಂಡಿದ್ದಾರೆ, ಖುಷಿ ಹೆಚ್ಚಿಸಲು. ಇನ್ನೇನು ಬೇಕು?
March 7, 2008 5:35 PM

nilgiri said...
ನಮಸ್ಕಾರ ಸುಪ್ತದೀಪ್ತಿ ಅವರಿಗೆ,
ಬ್ಲಾಗಿನ ಪ್ರಪಂಚಕ್ಕೆ ನಾನು ಹೊಸಬಳು. ಹೀಗೆ ಸುತ್ತಾಡುವಾಗ ನಿಮ್ಮ ಬ್ಲಾಗ್ ಕಣ್ಣಿಗೆ ಬಿತ್ತು :) ನಿಮ್ಮ ಬರಹ ನನಗೆ ತುಂಬಾ ಇಷ್ಟವಾಯಿತು.
March 9, 2008 5:03 PM

ಸುಪ್ತದೀಪ್ತಿ suptadeepti said...
'ನೀಲಗಿರಿ'ಯವರಿಗೆ ಸ್ವಾಗತ, ವಂದನೆ ಮತ್ತು ಧನ್ಯವಾದ. ಹೀಗೇ ಬರುತ್ತಿರಿ, ಬರೆಯುತ್ತಿರಿ.
March 9, 2008 9:36 PM

ಸುಪ್ತದೀಪ್ತಿ suptadeepti said...
ಮನಸ್ವಿನಿ, ನನ್ನಿಂದ ತಪ್ಪಾಗಿದೆ, ಕ್ಷಮಿಸು. ನಿನ್ನ ಪ್ರತಿಕ್ರಿಯೆ ಪತ್ರಗಳ ಸಾಲಿನಲ್ಲಿ ಎಡೆಯಲ್ಲಿ ಸಿಕ್ಕಿಕೊಂಡಿತ್ತು, ಸರಿಯಾಗಿ ನೋಡದೆ ಪ್ರಕಟ ಆಗಲಿಲ್ಲ."ತಲೆ ಬೊಂಡ ಮಾಡುವವರು" ಇನ್ನೂ ಬೇಕಾಗಿದ್ದಾರೆ. ಸಿಗುತ್ತಾರಾ?
ಮತ್ತೊಮ್ಮೆ Sorry ಜೊತೆಗೆ Thanks.
March 10, 2008 9:26 AM

srinivas said...
'ತಲೆ ಬೊಂಡ ಮಾಡುವವರು ಸಿಗುತ್ತಾರಾ?’ ಹೆ ಹೆ ಹೆ - ದಕ್ಷಿಣ ಕರ್ನಾಟಕದ ನಾನು ಈ ಪದಗಳನ್ನು ಓದಿದ್ದು ಹೀಗೆ 'ತಲೆ ಬೋಡು ಮಾಡುವವರು ಸಿಗುತ್ತಾರಾ?’
ಈ ಪದಗಳಿಗೂ ಶ್ರೀ ಪೆಜತ್ತಾಯ ಅವರು ನನಗೆ ಇಟ್ಟ ಹೆಸರಿಗೂ ಸ್ವಲ್ಪ ಸಂಬಂಧ ಇದೆ ಎಂದೆನಿಸುತ್ತದೆ
ಶ್ರೀ ಪೆಜತ್ತಾಯರವರು ನನ್ನ ಕೆಲವು ವೈಯಕ್ತಿಕ ಬರಹಗಳನ್ನು ಓದಿ, ನನಗೆ ಇಟ್ಟ ಹೆಸರು ಡಾ ಮೋಸಸ್ - ಹೇಗೆ ಅರ್ಥೈಸುತ್ತೀರ ನೋಡಿ, ಅದು ನಿಮಗೇ ಬಿಟ್ಟದ್ದು.
March 22, 2008 10:33 PM

ಸುಪ್ತದೀಪ್ತಿ suptadeepti said...
ನಮಸ್ಕಾರ ಶ್ರೀನಿವಾಸರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶ್ರೀ ಪೆಜತ್ತಾಯರು ನಿಮಗಿಟ್ಟ ಹೆಸರಿನ ಅರ್ಥ ಗೊತ್ತಾಗಲಿಲ್ಲ, ನನ್ನ ಲೋಕಜ್ಞಾನ ಈ ನಿಟ್ಟಿನಲ್ಲಿ ಕಡಿಮೆಯಿರಬಹುದು. ವಿವರಿಸುವಿರಾ?
March 23, 2008 8:49 AM