ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 29 August, 2009

ಮರೆಯ ಮನ

ಕಣ್ಣಲ್ಲೊಂದು ಹನಿ, ಎದೆಯಲ್ಲೊಂದು ಮೊನೆ,
ಮೊಗದಲ್ಲಿ ಬಿರಿದರಳು ದುಂಡು ಮಲ್ಲಿಗೆ,
ಮನಸೇಕೊ ಕಡು-ಕಡು ಕೆಂಡ ಸಂಪಿಗೆ.

ಕಣ್ವರಾನಂದಕ್ಕೆ ನೀರಿನುಂಗುರದುರುಳು,
ಸಾವಿತ್ರಿಗಿತ್ತಲ್ಲಿ ಸಾವಿನರಮನೆ,
ಊರ್ಮಿಳೆಯ ತಾಪಕ್ಕೆ ಮೂರು ಸೆರೆಮನೆ.

ಜಾನಕಿಯ ವನವಾಸ ಕರ್ತವ್ಯದನಾಯಾಸ,
ಮತ್ತಶೋಕ ವನದಲ್ಲಿ ಶೋಕಮನ,
ಪಾಂಚಾಲಿಯಜ್ಞಾತ ರಕ್ತ-ಸಿಂಚನ.

ಅಕ್ಕನುಸಿರಿಗೆ ಉಸಿರು ಕೊಟ್ಟ ದೇವಗೆ ಹೆಸರು,
ಚೆನ್ನಮ್ಮನಲಿ ತುಂಬು ಸ್ಥೈರ್ಯದಾ ಸೆಲೆ,
ಬೇಗೆಯೊಳಗೊಲುಮೆಯೇ ನೆಮ್ಮದಿಯ ನೆಲೆ.

ಮರೆಯಲಾರದ ಮನಕೆ ಮರೆಯಬಾರದ ಕನಸು-
ಸುಪ್ತ-ಜಾಗೃತಿಯೊಳಗೆ ಮನಸು ಕೂಸು.
(೧೧-ಫ಼ೆಬ್ರವರಿ-೨೦೦೪)

Monday 24 August, 2009

ಲಂಕೇಶ್ವರ

ಮರಿಕಪಿಯ ತೊಟ್ಟಿಲಿಗೆ ಕಟ್ಟಿಸಿಕೊಂಡು
ಕೈ-ಕಾಲಾಡಿಸಿ ಕೂಸನಾಡಿಸಿದ;
ಮಹಾಬಲಿಯ ಬಲವರಿಯಲು ಹೋಗಿ
ಸೆರೆಯಲಿ ಕನ್ನೆಯರ ಜೊತೆಗಾಡಿದ;
ದೇವೇಂದ್ರನ ಕೆಣಕಿ, ಗೋಣು ಕೆಳಹಾಕಿ
ಮಗನಿಂದ ಮನೆಗೆ ಹಿಂದಿರುಗಿದ;
ದ್ವಿದಶ ಭುಜಶಾಲಿ ಸಹಸ್ರ ಭುಜನನು ಹುಡುಕಿ
ಕೆಣಕಿ, ಕಾದಿ, ಮಣ್ಣು ಮೆತ್ತಿಸಿಕೊಂಡ;
ಅಸಮಬಲ ಸಾಹಸಿ ದಶಕಂಠ
ಅಜ್ಜನ ಕರುಣೆಯಿಂದ ಸ್ನೇಹವುಂಡ.

ಅಷ್ಟಾದರೂ ಒಂದೇ ಒಂದು ತಲೆಯೊಳಗೂ
ಬುದ್ಧಿ ಬಲಿಯದೆ, ಅರಿವು ಮೂಡದೆ,
ಕೆಂಡವ ಕೆದಕಿ ಸೆರಗಿನಲಿಟ್ಟುಕೊಂಡ,
ತನ್ನ ವಂಶವ ತಾನೇ ಸುಟ್ಟುಕೊಂಡ.
(೦೭-ಅಕ್ಟೋಬರ್-೨೦೦೬)

Tuesday 18 August, 2009

ಶೂನ್ಯದೊಳಗೆ...

"ನಕ್ಷತ್ರಗಳೋ... ಕನಸುಗಳೋ..."
ಅಚ್ಚರಿಪಟ್ಟ ಒಬ್ಬ ಗೆಳೆಯ
ಕಾಕತಾಳೀಯವಾಗಿ ಅದೇ ಸಂಜೆ
ಉರಿವ ಬೆಂಕಿಯುಂಡೆಗಳ ಬಗ್ಗೆ-
ಸೋಜಿಗಗೊಂಡ ನನ್ನಿನಿಯ
ನಾನೂ ತಲೆ ಕೆರೆದೆ!
"ಹೀಲಿಯಂ" ಎಂದ ಮಗ
"ಏನೂ... ಇಲಿಯಾ...?" ಉಲಿದಳು ಪುಟ್ಟವಳು

ಎಲ್ಲರ ತಲೆಯಲ್ಲೂ ಒಂದಿಲ್ಲೊಂದು ಯೋಚನೆ!
ಗೆಳೆಯ ಕವನ ಬರೆದ
ಇನಿಯ ವೆಬ್-ಸೈಟ್ ತೆರೆದ
ಮಗ-ಮಗಳು ಮಿನುಗುಗಳಿಗೆ
‘ಗುಡ್-ನೈಟ್’ ಗುನುಗಿ
ಬೆಚ್ಚನೆ ಉಸಿರೆಳೆದರು.

ನನ್ನೊಳಗೆ ದೊಡ್ಡದೊಂದು ಉಸಿರಿನ ಸುಯ್ಲೆದ್ದಿತು,
ತಲೆಯಲ್ಲಿ ಬ್ರಹ್ಮಾಂಡ-
-ದ ಆಸ್ಫೋಟ!
ಕಣ್ಣು ಮುಚ್ಚಿ ಕುರ್ಚಿಯ ಬೆನ್ನಿಗೊರಗಿದೆ...

ಬೆಚ್ಚಿಸುವ ಸದ್ದು,
ಹುಚ್ಚಾಗಿಸುವ ಬೆಳಕಿನುಂಡೆ-
-ಗಳ ಹಾರಾಟ...
ನನ್ನ ಚೀರಾಟ ಸತ್ತಿತ್ತು!
ಉಸಿರಾಟ ಮಾತ್ರ ನಡೆದಿತ್ತು!
ತುದಿ ಮೊದಲಿಲ್ಲದ ನೀಹಾರಿಕೆಗಳ ನಡುವೆ
ದೃಷ್ಟಿಗೆ ಕಂಡೂ ಕಾಣದ ಕತ್ತಲೆಯೊಳಗೆ
ಕೇಳುತ್ತಿದ್ದ ಆಸ್ಫೋಟಗಳೆಡೆಯಲ್ಲಿ
ಮಿತಿ ಮೀರಿದ ಉಸಿರಾಟ.
ಬೆಕಿನುಂಡೆಗಳ ಸಮೂಹದಲ್ಲಿ
ಆಚ್ಛಾದಿತ ಅವಕಾಶದಲ್ಲಿ
‘ಆಕಾಶ’ವೆಲ್ಲಿ?
ಸೂರ್ಯ-ಚಂದ್ರ-ತಾರಾನಿವಹಗಳೆಲ್ಲಿ?
ಭೂಮಿಯೆಲ್ಲಿ, ಬಾನೇ ಇಲ್ಲದಲ್ಲಿ?
ಆ ತಾಯಿ ಕಳ್ಳ-ಕಂದನ ಬಾಯಲ್ಲಿ
ಕಂಡ ಶೂನ್ಯ ಇದೇ ಏನು?
ಕುರುಡು ಚಕ್ರವರ್ತಿ ಕಂಡ
‘ವಿಶ್ವರೂಪ’ ಇದೇ ಆಗಿತ್ತೆ?
ಎಲ್ಲೆಲ್ಲೂ ತುಂಬಿದ ಕತ್ತಲು
ಮತ್ತೆತ್ತೆತ್ತಲೂ ತುಂಬಿದ
ಮಿಣುಕು ತಿಣುಕುವ ‘ಹೀಲಿಯಮ್’ ಗೋಳಗಳು!
ಪ್ರತ್ಯಕ್ಷ ಕಂಡರೂ ಪರಾಂಬರಿಸಬೇಕು...
ಕಂಡವರೇ ಇಲ್ಲವಾದಾಗ?

"ಖಗೋಳ ವಿಜ್ಞಾನ ಬಹುತೇಕವಾಗಿ
ಕರಾರುವಾಕ್ ಲೆಕ್ಕಾಚಾರ..."
ಅಪ್ಪ ಮಗನಿಗೆ ಪಾಠ ಹೇಳಿದ್ದರು
ನಿಗೂಢ ಸೆಳೆತಗಳೊಳಗೆ ಸಿಲುಕಿ
ಸುತ್ತುವ ಅವುಗಳ ಕುರಿತ ಜಿಜ್ಞಾಸೆ;
ಯಾರ ಲೆಕ್ಕಾಚಾರವೂ ತಪ್ಪಬಹುದಲ್ಲ!

ಶೂನ್ಯದ ಅವಕಾಶದೊಳಗೆ
ಎಲ್ಲೋ ಕಳೆದು ಹೋಗದಂತೆ
ನಮ್ಮದೆಂದುಕೊಳ್ಳುವ ನೆಲಕ್ಕೆ
ಅಂಟಿಕೊಳ್ಳ ಬಯಸುವ ನಾವು...
ಮನುಜರು...
"ಪೂರ್ಣಮದಃ ಪೂರ್ಣಮಿದಂ..."
ಅಂದವರು...
ವ್ಯೋಮಯಾನಗೈದೆವೆಂದು
ನಂನಮ್ಮ ಬೆನ್ನನ್ನೇ ತಟ್ಟಿಕೊಂಡವರು...
ನಾವೆಷ್ಟು ಅಪೂರ್ಣರೆಂಬ
ಕಲ್ಪನೆಯೇ ಇರದವರು...
ಅತ್ತಿತ್ತ ನೋಡಿ ಪಕ್ಕದವರಿಗೆ
ಮೊಣಕೈಯಲ್ಲಿ ತಿವಿದು
ಶೂನ್ಯ ನೋಟ ಬೀರುವವರು...
ಆ ಅವರು... ಈ ಇವರು...

ಮತ್ತೆ ಆಸ್ಫೋಟ...

ಆಚೆ ಮನೆಯಲ್ಲಿ ಗುಂಡು ಹಾರಿಸಿದ ಸದ್ದು
ಕುರ್ಚಿಯಿಂದೆದ್ದು ಕಿಟಕಿಯ ಪರದೆ ಸರಿಸಿ
ದೂರಕ್ಕೆ ದಿಟ್ಟಿ ನೆಟ್ಟಾಗ...
ಮಿನುಗುಗಳೆಲ್ಲ ಸುಖವಾಗಿ
ತಣ್ಣನೆ ಮೋಡದ ಹೊದಿಕೆ ಹೊದ್ದು
ಕಣ್ಣು ಮುಚ್ಚಿ ಕನಸುವುದ ಕಂಡು
ನನ್ನುಸಿರು ನಿಧಾನವಾಗಿ ಸಮಸ್ಥಿತಿಗಿಳಿಯಿತು

ನನಗಾಗಿ ಒಂದಿಷ್ಟು ತಂಪು ಕನಸುಗಳನ್ನು
ಕೈಬೀಸಿ ಕರೆದು ದಿಂಬಿಗೊರಗಿದೆ.
(೨೦-ಅಕ್ಟೋಬರ್-೨೦೦೧)
{ಕವಿ ಮಿತ್ರ ಎಂ. ಆರ್. ದತ್ತಾತ್ರಿಯ ಕವನದ ಸ್ಫೂರ್ತಿಯಿಂದ}

Wednesday 12 August, 2009

ಉತ್ಸವ

ವ್ಯಕ್ತಿರೂಪ ಹಂಗಿಲ್ಲದ
ಶಕ್ತಿರೂಪ ಚೇತನ-
ನಿನಗೇಕೆ ಹೆಸರು
ಕಲ್ಲಿನ ಕುಸುರು
ವೈಭವದ ಕೆಸರು!

ಯಾಕೆ ಬೇಕು ನಿನಗೆ-
ಪತಾಕೆಗಳ ಹಾವಳಿ
ಗೋಪುರದ ಬಾವಲಿ
ಗುಣುಗುಡುವ ಗಂಟೆ
ಅಂಟುಸ್ನಾನದ ತಂಟೆ!

ನಿನ್ನ ಸಾವಿರಾರು ಸಾವಿರ
ಹೆಸರುಗಳಲ್ಲಿ ನನಗೂ ಒಂದು-
ನಿನ್ನ ತೃಣ ನಾನೆಂಬ ನೆಪಕಾಗಿ
ನಿನ್ನ ಋಣ ನನಗೆಂಬ ನೆನಪಿಗಾಗಿ
ನಿನ್ನ ಘನತೆಯ ಸಣ್ಣ ಕುರುಹಾಗಿ!

(೧೨-ಆಗಸ್ಟ್-೨೦೦೮)

Sunday 2 August, 2009

ಶಿವೋಹಂ

ಜ್ಞಾನ ಮುದ್ರಾಂಕಿತ ಧ್ಯಾನಯೋಗಿಯ
ಅರ್ಧನಿಮೀಲಿತ ರೆಪ್ಪೆಗಳ ಕೆಳಗೆ
ಸಿಡುಕು ಮೂಗಿನ ನೇರದೊಳಗೆ
ಅರೆ-ಬರೆಯಾಗಿ ಕಂಡದ್ದು-
ಅಂತಃಪುರದ ಹಂಸತಲ್ಪದಡಿಯಲ್ಲಿ
ಕುರುಡುಗತ್ತಲ ಮೂಲೆಯಲ್ಲಿ
ಮೂಷಿಕ ಸವಾರಿ ಹೊರಟ
ಮುದ್ದಿನ ಕುವರ.

ಲೋಕ ಸುಟ್ಟರೂ ತೊಂದರೆಯಿಲ್ಲ
ಕೆಂಡಗಣ್ಣನ ಕೋಪ
ಆರದೆ ವಿಧಿಯಿಲ್ಲ
ಬಲಿಯಾಗಲೇಬೇಕು;
ತಲೆಕೊಡಲು ಯಾರಿದ್ದೀರಿ
ಕಂದನ ಮುಂಡಕ್ಕೆ?
(೦೮-ಸೆಪ್ಟೆಂಬರ್-೨೦೦೬)